ಮತ್ತೆ ರಾಹುಲ್ ಗಾಂಧಿ ಟೆಂಪಲ್ ರನ್
ಇತ್ತೀಚೆಗಷ್ಟೇ ಮುಕ್ತಾಯಗೊಂಡ ಗುಜರಾತ್ ವಿಧಾನಸಭಾ ಚುನಾವಣೆ ವೇಳೆ ಹಲವು ದೇಗುಲಗಳಿಗೆ ಭೇಟಿ ನೀಡುವ ಮೂಲಕ ಹಿಂದೂಗಳ ಓಲೈಕೆ ಮಾಡಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಉತ್ತರಪ್ರದೇಶದಲ್ಲೂ ಇದೇ ಮಂತ್ರ, ತಂತ್ರ ಅನುಸರಿಸುವ ಸುಳಿವು ನೀಡಿದ್ದಾರೆ.
ರಾಯ್ಬರೇಲಿ: ಇತ್ತೀಚೆಗಷ್ಟೇ ಮುಕ್ತಾಯಗೊಂಡ ಗುಜರಾತ್ ವಿಧಾನಸಭಾ ಚುನಾವಣೆ ವೇಳೆ ಹಲವು ದೇಗುಲಗಳಿಗೆ ಭೇಟಿ ನೀಡುವ ಮೂಲಕ ಹಿಂದೂಗಳ ಓಲೈಕೆ ಮಾಡಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಉತ್ತರಪ್ರದೇಶದಲ್ಲೂ ಇದೇ ಮಂತ್ರ, ತಂತ್ರ ಅನುಸರಿಸುವ ಸುಳಿವು ನೀಡಿದ್ದಾರೆ.
ಎರಡು ದಿನಗಳ ಉತ್ತರಪ್ರದೇಶ ಪ್ರವಾಸಕ್ಕಾಗಿ ಸೋಮವಾರ ಲಖನೌಗೆ ಬಂದಿಳಿದ ರಾಹುಲ್ ಗಾಂಧಿ ಅಲ್ಲಿಂದ ತಾವು ಲೋಕಸಭೆಯನ್ನು ಪ್ರತಿನಿಧಿಸುವ ಅಮೇಠಿ ಕ್ಷೇತ್ರಕ್ಕೆ ತೆರಳುವ ವೇಳೆ ಹನುಮಂತನ ದೇಗುಲಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಿದ ರಾಹುಲ್ರನ್ನು ಪಕ್ಷದ ಕಾರ್ಯಕರ್ತರು ಸಂಭ್ರಮದಿಂದ ಸ್ವಾಗತಿಸಿದರು. ಬಳಿಕ ಲಖನೌ- ರಾಯ್ಬರೇಲಿ ರಸ್ತೆಯಲ್ಲಿರುವ ಚೂರ್ವಾ ಹನುಮಾನ್ ಮಂದಿರಕ್ಕೆ ಭೇಟಿ ನೀಡಿದ ರಾಹುಲ್, ಹೊರಗೆ ಬರುವಾಗ ಹಣೆಯ ಮೇಲೆ ತಿಲಕ ಇಟ್ಟುಕೊಂಡಿದ್ದು ಗಮನ ಸೆಳೆಯಿತು. ರಾಹುಲ್ ಬಹಳ ಬಾರಿ ಅಮೇಠಿಗೆ ಭೇಟಿ ನೀಡಿರುವಾದರೂ, ದೇಗುಲವೊಂದರಲ್ಲಿ ಪ್ರಾರ್ಥನೆ ಸಲ್ಲಿಸಿದ್ದು ಇದೇ ಮೊದಲ ಬಾರಿ
ಎಂದು ಪಕ್ಷದ ಕಾರ್ಯಕರ್ತರೊಬ್ಬರು ಪ್ರತಿಕ್ರಿಯಿಸಿದ್ದಾರೆ. 2016ರಲ್ಲಿ ರಾಹುಲ್ ಅಯೋಧ್ಯೆಗೆ ಭೇಟಿ ನೀಡಿದ್ದ ವೇಳೆ ವಿವಾದಿತ ರಾಮಮಂದಿರ - ಬಾಬ್ರಿ ಮಸೀದಿಗೆ ಸಮೀಪವೇ ಇರುವ ಹನುಮಾನ್ ದೇಗುಲಕ್ಕೆ ಭೇಟಿ ನೀಡಿದ್ದರು. ಅದು 1992 ರಲ್ಲಿ ಬಾಬ್ರಿ ಮಸೀದಿ ಧ್ವಂಸಗೊಂಡ ಬಳಿಕ ಗಾಂಧೀ-ನೆಹರೂ ಕುಟುಂಬದ ವ್ಯಕ್ತಿಯೊಬ್ಬರು ಅಯೋಧ್ಯೆಗೆ ಭೇಟಿ ನೀಡಿದ ಮೊದಲ ಘಟನೆಯಾಗಿತ್ತು.