ನೀಮೋ ಪರಾರಿಯಾಗುವಾಗ ಚೌಕಿದಾರ್ ಎಲ್ಲಿ ಹೋಗಿದ್ದರು!
ಪಂಜಾಬ್ ನ್ಯಾಷನಲ್ ಬ್ಯಾಂಕ್ನಲ್ಲಿ ನಡೆದ 11,400 ಕೋಟಿ ರು. ಹಗರಣ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರು ಮೌನ ಮುರಿಯಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.
ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ನಲ್ಲಿ ನಡೆದ 11,400 ಕೋಟಿ ರು. ಹಗರಣ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರು ಮೌನ ಮುರಿಯಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.
ಮದ್ಯ ದೊರೆ ವಿಜಯ್ ಮಲ್ಯ ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗೆ ವಂಚಿಸಿ ವಿದೇಶಕ್ಕೆ ಪರಾರಿಯಾದ ರೀತಿಯಲ್ಲೇ ವಜ್ರೋದ್ಯಮಿ ನೀರವ್ ಮೋದಿ ಪಿಎನ್ಬಿಗೆ ವಂಚಿಸಿ ವಿದೇಶಕ್ಕೆ ಪರಾರಿಯಾದ ಸಂದರ್ಭದಲ್ಲಿ ದೇಶ ಕಾಯುವ ವ್ಯಕ್ತಿ(ಚೌಕೀದಾರ್) ಎಲ್ಲಿದ್ದರು ಎಂದು ಕೇಂದ್ರ ಸರ್ಕಾರದ ವಿರುದ್ಧ ಸೋಮವಾರ ರಾಹುಲ್ ತೀಕ್ಷ್ಣವಾಗಿ ವಾಕ್ಪ್ರಹಾರ ನಡೆಸಿದ್ದಾರೆ.
ಈ ಬಗ್ಗೆ ‘ಮೋದಿಯಿಂದ ಭಾರತದ ಕೊಳ್ಳೆ’ (ಮೋದಿ ರಾಬ್ಸ್ ಇಂಡಿಯಾ) ಹ್ಯಾಶ್ಟ್ಯಾಗ್ ಬಳಸಿ ಟ್ವೀಟ್ ಮಾಡಿರುವ ರಾಹುಲ್, ‘ನೀರವ್ ಮೋದಿ ವಿಚಾರದಲ್ಲಿ ಪ್ರಧಾನಿ ಮೋದಿ ತಟಸ್ಥವಾಗಿರುವುದರ ಹಿಂದಿನ ಉದ್ದೇಶವಾದರೂ ಏನು ಎಂದು ತಿಳಿಯಲು ದೇಶದ ಜನತೆ ಕಾತರರಾಗಿದ್ದಾರೆ. ಮೊದಲಿಗೆ ಲಲಿತ್ ಮೋದಿ, ನಂತರ ವಿಜಯ್ ಮಲ್ಯ ಇದೀಗ ನೀರವ್ ಮೋದಿ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದಾರೆ.
ಇವರೆಲ್ಲರೂ ದೇಶಬಿಟ್ಟು ಪರಾರಿಯಾಗುವ ಸಂದರ್ಭದಲ್ಲಿ ದೇಶ ಕಾಯುವ ವ್ಯಕ್ತಿ(ಮೋದಿ) ಎಲ್ಲಿ ಹೋಗಿದ್ದರು,’ ಎಂದು ಪ್ರಶ್ನಿಸುವ ಮೂಲಕ, ಈ ಹಿಂದಿನ ಚುನಾವಣೆ ಪ್ರಚಾರದ ವೇಳೆ ಭ್ರಷ್ಟಾಚಾರದಲ್ಲಿ ಭಾಗಿಯಾಗಲ್ಲ. ಭ್ರಷ್ಟಾಚಾರ ನಡೆಸುವವರನ್ನೂ ಸುಮ್ಮನೇ ಬಿಡಲ್ಲ, ನಾನು ದೇಶದ ಕಾವಲುಗಾರನಾಗಿರುತ್ತೇನೆ ಎಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟಾಂಗ್ ನೀಡಿದರು.