ರಾಹುಲ್ ಸೋಲಿಗೆ ಕಾರಣವೇನು: ಅಧ್ಯಯನಕ್ಕಾಗಿ ಅಮೇಥಿಗೆ ತೆರಳಿದ ತಂಡ
ರಾಹುಲ್ ಸೋಲಿಗೆ ಕಾರಣವೇನು: ಅಧ್ಯಯನಕ್ಕಾಗಿ ಅಮೇಥಿಗೆ ತೆರಳಿದ ಶರ್ಮಾ ನೇತೃತ್ವದ ಎಐಸಿಸಿ ತಂಡ
ನವದೆಹಲಿ[ಮೇ.31]: ಕಾಂಗ್ರೆಸ್ ಹಾಗೂ ಗಾಂಧಿ ಕುಟುಂಬದ ಭದ್ರ ಕೋಟೆ ಎಂದೇ ಖ್ಯಾತವಾಗಿದ್ದ ಉತ್ತರ ಪ್ರದೇಶದ ಅಮೇಠಿ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಆಘಾತಕಾರಿ ಸೋಲಿಗೆ ಕಾರಣ ಏನು ಎಂಬುದರ ಅಧ್ಯಯನಕ್ಕಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಒಂದು ತಂಡವನ್ನು ರವಾನಿಸಿದ್ದಾರೆ. ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರು ತಮ್ಮ ಎದುರಾಳಿ ಬಿಜೆಪಿಯ ಸ್ಮೃತಿ ಇರಾನಿ ಅವರಿಂದ ಸೋಲುಂಡಿದ್ದರು.
ಹೀಗಾಗಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಜುಬೇರ್ ಖಾನ್ ಹಾಗೂ ರಾಯ್ಬರೇಲಿ ಲೋಕಸಭಾ ಕ್ಷೇತ್ರದ ಉಸ್ತುವಾರಿಯಾದ ಕೆ.ಎಲ್. ಶರ್ಮಾ ಅವರ ನೇತೃತ್ವದ ತಂಡವನ್ನು ಅಮೇಠಿಗೆ ರವಾನಿಸಲಾಗಿದ್ದು, ತಮ್ಮ ಸೋಲಿಗೆ ಕಾರಣವೇನು ಎಂಬುದನ್ನು ಅಧ್ಯಯನ ಮಾಡಿ ಶೀಘ್ರದಲ್ಲೇ ವರದಿ ಸಲ್ಲಿಸುವಂತೆ ಈ ತಂಡಕ್ಕೆ ರಾಹುಲ್ ಸೂಚಿಸಿದ್ದಾರೆ ಎಂದು ಹೇಳಲಾಗಿದೆ.
2009ರವರೆಗೂ ಶರ್ಮಾ ಅವರು ಅಮೇಠಿ ಉಸ್ತುವಾರಿಯನ್ನೇ ನೋಡಿಕೊಂಡಿದ್ದರು. ಆದರೆ, ಮಧ್ಯಪ್ರದೇಶದ ಕಾಂಗ್ರೆಸ್ ಕಾರ್ಯಕರ್ತ ಚಂದ್ರಕಾಂತ್ ಅವರನ್ನು ಅಮೇಠಿ ಉಸ್ತುವಾರಿಯಾಗಿ ಮಾಡಲಾಗಿದ್ದು, ಶರ್ಮಾ ಅವರನ್ನು ರಾಯ್ಬರೇಲಿ ಕ್ಷೇತ್ರದ ಉಸ್ತುವಾರಿಯಾಗಿ ನೇಮಿಸಲಾಗಿತ್ತು.