ರಫೇಲ್ ಯುದ್ಧ ವಿಮಾನದ ದರ ತಿಳಿಸುವಂತೆ ಕಾಂಗ್ರೆಸ್ ಅಧ್ಯಕ್ಷ ಒತ್ತಾಯ! ನವದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪತ್ರಿಕಾಗೋಷ್ಠಿ! ‘ರಫೆಲ್ ಹಗರಣದ ತನಿಖೆ ನಡೆದರೆ ಪ್ರಧಾನಿ ಮೋದಿ ರಾಜಕೀಯ ಭವಿಷ್ಯ ಅಂತ್ಯ’! ‘ಅನಿಲ್ ಅಂಬಾನಿಗೆ ಸಹಾಯ ಮಾಡಲು ರಫೆಲ್ ಹಗರಣ ನಡೆಸಿದ ಮೋದಿ’! ಡಸಾಲ್ಟ್ ಕಂಪನಿ ಸಿಇಒ ಹೇಳುವುದೆಲ್ಲಾ ಬರಿ ಸುಳ್ಳು ಎಂದ ರಾಹುಲ್
ನವದೆಹಲಿ(ನ.2): ಒಂದು ವೇಳೆ ರಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದದ ಕುರಿತು ತನಿಖೆ ನಡೆದಿದ್ದೇ ಆದರೆ, ಪ್ರಧಾನಿ ನರೇಂದ್ರ ಮೋದಿ ಅವರ ರಾಜಕೀಯ ಭವಿಷ್ಯ ಅಂತ್ಯವಾಗಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ನವದೆಹಲಿಯಲ್ಲಿ ಇಂದು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ರಾಹುಲ್, ನಾನು ಖಚಿತವಾಗಿ ಹೇಳಬಲ್ಲೆ ರಫೆಲ್ ತನಿಖೆ ನಡೆದರೆ ಪ್ರಧಾನಿ ಮೋದಿ ರಾಜಕೀಯ ಭವಿಷ್ಯ ಅಂಧಕಾರದಲ್ಲಿ ಮುಳುಗಲಿದೆ’ಎಂದು ಹೇಳಿದರು.
ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್ ರಫೆಲ್ ಯುದ್ಧ ವಿಮಾನ ಖರೀದಿ ದರದ ವಿವರ ಸಲ್ಲಿಸುವಂತೆ ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಅದರ ಬೆನ್ನಲ್ಲೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ರಫೇಲ್ ಯುದ್ಧ ವಿಮಾನದ ದರವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ರಿಲಯನ್ಸ್ ಡಿಫೆನ್ಸ್ನ ಮುಖ್ಯಸ್ಥ ಅನಿಲ್ ಅಂಬಾನಿ ಜಂಟಿಯಾಗಿ ರಫೇಲ್ ಡೀಲ್ ಕುದುರಿಸಿದ್ದಾರೆ ಎಂದು ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.
ನಷ್ಟದಲ್ಲಿದ್ದ ಅಂಬಾನಿ ಕಂಪನಿಗೆ ಡಸಾಲ್ಟ್ ಕಂಪನಿ 284 ಕೋಟಿ ರೂ. ಕೊಟ್ಟಿದ್ದೇಕೆ? ಎಂಬ ಪ್ರಶ್ನೆಯನ್ನು ರಾಹುಲ್ ಮುಂದಿಟ್ಟಿದ್ದಾರೆ. ಇದು ಡಸಾಲ್ಟ್ ಕಂಪನಿಯು ಅಂಬಾನಿ ಕಂಪನಿಗೆ ನೀಡಿದ ಕಿಕ್ಬ್ಯಾಕ್ ಹಣ ಎಂದು ರಾಹುಲ್ ಆರೋಪಿಸಿದ್ದಾರೆ.
ಡಸಾಲ್ಟ್ ಏವಿಯೇಷನ್ ಕಂಪನಿಯ ಸಿಇಒ ಓರ್ವ ವ್ಯಕ್ತಿಯನ್ನು ರಕ್ಷಣೆ ಮಾಡುತ್ತಿದ್ದಾರೆ. ಆ ವ್ಯಕ್ತಿ ಒಂದು ರಾಷ್ಟ್ರವನ್ನು ಮುನ್ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಯಾರ ಹೆಸರನ್ನು ಹೇಳದೆ ವಾಗ್ದಾಳಿ ನಡೆಸಿದ್ದಾರೆ. ಒಂದು ವೇಳೆ ತನಿಖೆ ಆರಂಭಗೊಂಡಿದ್ದೇ ಆದರೆ ಪ್ರಧಾನಿ ಮೋದಿ ಖಂಡಿತ ಬಚಾವಾಗಲು ಸಾಧ್ಯವಿಲ್ಲ ಎಂದು ರಾಹುಲ್ ಹೇಳಿದರು.
