ಬಿಜೆಪಿ ದುರಾಸೆಗೆ ಕರ್ನಾಟಕದ ಜನ ಸೋತರು: ರಾಹುಲ್!
ಕೊನೆಗೂ ಪತನಗೊಂಡ ರಾಜ್ಯ ಮೈತ್ರಿ ಸರ್ಕಾರ| ರಾಜ್ಯ ರಾಜಕಾರಣದ ಬೆಳವಣಿಗೆ ಕುರಿತು ರಾಹುಲ್ ಗಾಂಧಿ ಪ್ರತಿಕ್ರಿಯೆ| ‘ಬಿಜೆಪಿ ದುರಾಸೆಯಿಂದ ಪ್ರಜಾಪ್ರಭುತ್ವ, ಪ್ರಾಮಾಣಿಕತೆ ಮತ್ತು ಕರ್ನಾಟಕ ಜನತೆ ಸೋತಿದ್ದಾರೆ’| ಮೈತ್ರಿ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಶ್ಲಾಘಿಸಿದ ರಾಹುಲ್| ಬಿಜೆಪಿ ನಡೆ ವಿರೋಧಿಸಿದ ಪ್ರಿಯಾಂಕಾ ಗಾಂಧಿ|
ನವದೆಹಲಿ(ಜು.23): ರಾಜ್ಯ ಮೈತ್ರಿ ಸರ್ಕಾರ ಪತನಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿಯ ದುರಾಸೆಗೆ ಪ್ರಜಾಪ್ರಭುತ್ವ, ಪ್ರಾಮಾಣಿಕತೆ ಮತ್ತು ಕರ್ನಾಟಕ ಜನತೆ ಸೋತಿದ್ದಾರೆ ಎಂದು ಖೇದ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಮೈತ್ರಿ ಸರ್ಕಾರ ಉರುಳಿಸುವ ಬಿಜೆಪಿ ಹುನ್ನಾರ ಯಶಸ್ವಿಯಾಗಿದ್ದು ನಿಜವಾದರೂ ಮೈತ್ರಿ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಜನತೆ ಸ್ಮರಿಸಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಇನ್ನು ಕರ್ನಾಟಕದ ರಾಜಕೀಯ ಬೆಳವಣಿಗೆ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕಾ ಗಾಂಧಿ, ಎಲ್ಲವನ್ನೂ ಹಣದ ಮೂಲಕ ಖರೀದಿಸುವುದಾಗಿ ಬೀಗುತ್ತಿರುವ ಬಿಜೆಪಿಗೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹರಿಹಾಯ್ದಿದ್ದಾರೆ.
ನಿನ್ನೆ(ಜು.22)ವಿಧಾನಸಭೆಯಲ್ಲಿ ನಡೆದ ವಿಶ್ವಾಸಮತ ಯಾಚನೆಯಲ್ಲಿ, ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ 6 ಮತಗಳ ಅಂತರದಿಂದ ಪರಾಜಯ ಕಂಡ ಪರಿಣಾಮ ಸರ್ಕಾರ ಪತನಗೊಂಡಿತ್ತು.