ವಯನಾಡು ಜನತೆಗೆ ಥ್ಯಾಂಕ್ಸ್ ಹೇಳುತ್ತಲೇ ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರೆಸಿದ ರಾಹುಲ್
ವಯನಾಡು ಜನತೆಗೆ ಧನ್ಯವಾದ ತಿಳಿಸಲು ಕ್ಷೇತ್ರಕ್ಕೆ ತಲುಪಿದ ರಾಹುಲ್ ಗಾಂಧಿ| ವಯನಾಡು ನಾಗರಿಕರಿಗೆ ಥ್ಯಾಂಕ್ಸ್ ಹೇಳುತ್ತಲೇ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ವಯನಾಡು ಸಂಸದ|
ವಯನಾಡು[ಜೂ.08]: ಕೇರಳದ ವಯನಾಡು ಲೋಕ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ತಮ್ಮ ಕ್ಷೇತ್ರಕ್ಕೆ ಮೊದಲ ಬಾರಿ ಭೇಟಿ ನೀಡಿದ್ದಾರೆ. ತನ್ನನ್ನು ತಮ್ಮ ನಾಯಕನಾಗಿ ಆಯ್ಕೆ ಮಾಡಿದ ವಯನಾಡು ಜನತೆಗೆ ಧನ್ಯವಾದ ತಿಳಿಸಿರುವ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಕೇರಳಕ್ಕೆ ಭೇಟಿ ನೀಡುವುದಕ್ಕೂ ಮೊದಲೇ ತನ್ನ ಕ್ಷೇತ್ರ ತಲುಪಿದ ರಾಹುಲ್ ಗಾಂಧಿ, ನಾವು ಎಲ್ಲರನ್ನೂ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ ಎನ್ನುವ ಮೂಲಕ ಮೋದಿಗೆ ಟಾಂಗ್ ನೀಡಿದ್ದಾರೆ. ಇದೇ ವೇಳೆ ಮೋದಿ ವಿರುದ್ಧ ಕಿಡಿ ಕಾರಿರುವ ರಾಹುಲ್ 'ನರೇಂದ್ರ ಮೋದಿ ವಿಷದಂತೆ, ದೇಶದ ಕೆಟ್ಟ ಭಾವನೆಗಳಾದ ದ್ವೇಷ, ಸಿಟ್ಟು, ಅಸೂಯೆ, ಅಭದ್ರತೆ ಮತ್ತು ಸುಳ್ಳುಗಳನ್ನು ಪ್ರತಿನಿಧಿಸುತ್ತಿದ್ದಾರೆ. ಆದರೆ ತಾನು ಪ್ರೀತಿಯಿಂದಲೇ ಜನರ ಮನಸ್ಸನ್ನು ಗೆಲ್ಲುತ್ತೇನೆಂದು ಅವರು ಹೇಳಿಕೊಳ್ಳುತ್ತಾರೆ' ಎಂದಿದ್ದಾರೆ.
ಇದೇ ವೇಳೆ ಬಿಜೆಪಿ ವಿರುದ್ಧ ತಮ್ಮ ಹೋರಾಟ ನಿರಂತರ ಎಂಬುವುದನ್ನು ಸಾರಿ ಹೇಳಿರುವ ಕಾಂಗ್ರೆಸ್ ಅಧ್ಯಕ್ಷ 'ನಾವು ಕೇವಲ 52 ಸಂಸದರು ಇರಬಹುದು. ಆದರೆ ಸಂಸತ್ತಿನಲ್ಲಿ ಬಿಜೆಪಿ ವಿರುದ್ಧ ಹೋರಾಡುತ್ತೇವೆ' ಎಂದಿದ್ದಾರೆ.
ಇದೇ ಸಂದರ್ಭದಲ್ಲಿ ವಯನಾಡು ಜನತೆಗೆ ಆಶ್ವಾಸನೆಯೊಂದನ್ನು ನೀಡಿರುವ ರಾಹುಲ್ ' ವಯನಾಡಿನ ಜನತೆಗೆ ಕಾಂಗ್ರೆಸ್ ಬಾಗಿಲು ಸದಾ ತೆರೆದಿರುತ್ತದೆ. ನೀವು ಯಾರೇ ಆಗಿರಲಿ ನಿಮ್ಮ ವಯಸ್ಸು ಎಷ್ಟೇ ಇರಲಿ, ನಿಮ್ಮ ಸಿದ್ಧಾಂತ ಯಾವುದೇ ಇರಲಿ ನಿಮಗೆ ಕಾಂಗ್ರೆಸ್ ಬಾಗಿಲು ತೆರೆದಿರುತ್ತದೆ. ನೀವು ಪಕ್ಷವನ್ನು ಸೇರಬಹುದು, ನಿಮ್ಮ ಆಲೋಚನೆ ಹಂಚಿಕೊಳ್ಳಲು ಇಲ್ಲಿ ಅವಕಾಶವಿದೆ' ಎಂದಿದ್ದಾರೆ.