ಜರ್ಮನಿಯಲ್ಲಿ ಭಾರತವನ್ನು ಅವಮಾನಿಸಿದರಾ ರಾಹುಲ್..?
ಜರ್ಮನಿಯಲ್ಲಿ ಮಾತನಾಡುತ್ತಾ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭಾರತವನ್ನು ಅವಮಾನಿಸಿದ್ದಾರೆ. ಉಗ್ರವಾದವನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಇದಕ್ಕೆ ಅವರು ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ಮುಖಂಡರು ಆಗ್ರಹಿಸಿದ್ದಾರೆ.
ನವದೆಹಲಿ : ಜರ್ಮನಿಯಲ್ಲಿ ಭಾರತಕ್ಕೆ ತಮ್ಮ ಭಾಷಣದ ಮೂಲಕ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವಮಾನಿಸಿದ್ದಾರೆ. ಅಲ್ಲದೇ ಉಗ್ರವಾದವನ್ನು ಸಮರ್ಥಿಸಿಕೊಂಡಿದ್ದಾರೆ. ಪ್ರಧಾನಿ ಮೋದಿ ಸರ್ಕಾರದ ಬಗ್ಗೆಯೂ ಕೂಡ ಮನ ಬಂದಂತೆ ಮಾತನಾಡಿದ್ದಾರೆ ಎಂದು ಬಿಜೆಪಿ ಮುಖಂಡರು ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ವಕ್ತಾರರಾದ ಸಂಬಿತ್ ಪಾತ್ರ ಈ ಬಗ್ಗೆ ಪ್ರತಿಕ್ರಿಯಿಸಿ ರಾಹುಲ್ ಗಾಂಧಿ ತಮ್ಮ ಈ ಮಾತುಗಳ ಬಗ್ಗೆ ಕ್ಷಮೆಯಾಚಿಸಬೇಕು. ಬೇರೆ ದೇಶಗಳಲ್ಲಿ ನಮ್ಮ ದೇಶದ ಬಗ್ಗೆ ಇಂತಹ ಮಾತಗಳನ್ನಾಡಿರುವು ಅಕ್ಷಮ್ಯ ಎಂದಿದ್ದಾರೆ.
ಹ್ಯಾಮ್ ಬರ್ಗ್ ನಲ್ಲಿ ಗುರುವಾರ ಮಾತನಾಡಿದ ರಾಹುಲ್ ಗಾಂಧಿ ಐಸಿಸ್ ಉಗ್ರವಾದದ ಬಗ್ಗೆ ಮಾತನಾಡಿ ಔದ್ಯೋಗಿಕ ಸಮಸ್ಯೆಯ ಕಾರಣದಿಂದ ಐಸಿಸ್ ಉಗ್ರವಾದ ಸೃಷ್ಟಿಯಾಗುತ್ತಿದೆ ಎಂದು ಹೇಳಿದ್ದರು.
ಈ ಮೂಲಕ ಭಾರತದಲ್ಲಿಯೂ ಸೂಕ್ತ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗದೇ ಹೋದಲ್ಲಿ ಇಲ್ಲಿಯೂ ಉದ್ಯೋಗ ವಂಚಿತರು ಉಗ್ರರಾಗಲಿದ್ದಾರೆ ಎಂಬರ್ಥದಲ್ಲಿ ಅವರು ಹೇಳಿಕೆ ನೀಡಿದ್ದರು. ಈ ನಿಟ್ಟಿನಲ್ಲಿ ರಾಹುಲ್ ಗಾಂಧಿ ಕ್ಷಮೆ ಕೇಳಬೇಕು ಎಂದು ಬಿಜೆಪಿ ಮುಖಂಡರು ಆಗ್ರಹಿಸಿದ್ದಾರೆ.