ಮೈತ್ರಿಕೂಟದ ಸಂಪುಟ ವಿಸ್ತರಣೆ ನಂತರ ಭುಗಿಲೆದ್ದಿರುವ ಬಂಡಾಯ ಶಮನಕ್ಕೆ ಪ್ರಯತ್ನ ಮಾಡದೇ ದೂರವುಳಿದಿರುವ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಪ್ರಮುಖ ನಾಯಕರ ಧೋರಣೆಯನ್ನು ಕಾಂಗ್ರೆಸ್ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ. 

ಬೆಂಗಳೂರು: ಮೈತ್ರಿಕೂಟದ ಸಂಪುಟ ವಿಸ್ತರಣೆ ನಂತರ ಭುಗಿಲೆದ್ದಿರುವ ಬಂಡಾಯ ಶಮನಕ್ಕೆ ಪ್ರಯತ್ನ ಮಾಡದೇ ದೂರವುಳಿದಿರುವ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಪ್ರಮುಖ ನಾಯಕರ ಧೋರಣೆಯನ್ನು ಕಾಂಗ್ರೆಸ್ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಂಪುಟ ರಚನೆಯಾದ ನಂತರ ರಾಜ್ಯದಲ್ಲಿ ನಡೆದಿರುವ ಬೆಳವಣಿಗೆಗಳ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಸಚಿವ ಕೃಷ್ಣ ಬೈರೇಗೌಡ ಅವರಿಂದ ಪ್ರತ್ಯೇಕವಾಗಿ ವರದಿಯೊಂದನ್ನು ಪಡೆದಿರುವ ಹೈಕಮಾಂಡ್, ಬಂಡಾಯ ತೀವ್ರ ಗೊಂಡಾಗ ಅದನ್ನು ನಿವಾರಿಸುವ ಕುರಿತು ಸಿದ್ದರಾಮಯ್ಯ, ಖರ್ಗೆಯಂತಹ ಹಿರಿಯ ನಾಯಕರು ಮಾಡಿದ ಪ್ರಯತ್ನಗಳೇನು ಎಂಬ ಬಗ್ಗೆ ಮಾಹಿತಿ ಪಡೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ. 

ಶನಿವಾರ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ ದಿನೇಶ್ ಗುಂಡೂರಾವ್ ಹಾಗೂ ಕೃಷ್ಣ ಬೈರೇಗೌಡ ಅವರು ಹೈಕಮಾಂಡ್‌ಗೆ ವರದಿಯೊಂದನ್ನು ನೀಡಿದ್ದಾರೆ. ಆದರೆ, ಈ ಇಬ್ಬರು ನಾಯಕರು ನೀಡಿದ ವರದಿಯ ಸ್ವರೂಪವೇನು ಎಂಬುದನ್ನು ಸ್ಪಷ್ಟಪಡಿಸಿಲ್ಲ. ಆದರೆ, ಸಂಪುಟ ವಿಸ್ತರಣೆ ನಂತರ ರಾಜ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾಹಿತಿಯನ್ನು ರಾಹುಲ್ ಪಡೆದುಕೊಂಡಿದ್ದಾರೆ. 

ವಿಶೇಷವಾಗಿ ಬಂಡಾಯ ಶಮನಕ್ಕೆ ಹಿರಿಯ ಮುಖಂಡರಾದ ಸಿದ್ದರಾಮಯ್ಯ ಅವರು ಕೈಗೊಂಡ ಕ್ರಮವೇನು ಎಂಬ ಬಗ್ಗೆ ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ. ಸಂಪುಟ ವಿಸ್ತರಣೆಯ ಬೆನ್ನ ಹಿಂದೆಯೇ ಬಾದಾಮಿ ಪ್ರವಾಸಕ್ಕೆ ತೆರಳಿದ ಸಿದ್ದರಾಮಯ್ಯ ಅವರು ಬಂಡಾಯದ ಬೆಳವಣಿಗೆಯಿಂದ ಸಂಪೂರ್ಣವಾಗಿ ದೂರ ಉಳಿದಿದ್ದಾರೆ. ಈ ಬಗ್ಗೆ ಹೈಕಮಾಂಡ್ ಅಸಮಾಧಾನಗೊಂಡಿದೆ ಎಂದು ಹೇಳಲಾಗುತ್ತಿದೆ.