ರಾಜ್ಯ ಸಭಾ ಚುನಾವಣೆ: ಸಿಎಂ ಸಿದ್ದರಾಮಯ್ಯಗೆ ಸೊಪ್ಪು ಹಾಕದ ರಾಹುಲ್ ಗಾಂಧಿ
ಕಳೆದ ಎರಡು ವರ್ಷಗಳಲ್ಲಿ ಮುಖ್ಯಮಂತ್ರಿ ಹೇಳಿದ್ದಕ್ಕೆಲ್ಲ ಕತ್ತು ಅಲುಗಾಡಿಸುತ್ತಿದ್ದ ರಾಹುಲ್ ಗಾಂಧಿ ಈ ಬಾರಿ ರಾಜ್ಯಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಹೇಳಿದ ಮೂರೂ ಹೆಸರುಗಳ ಬದಲಿಗೆ ಖರ್ಗೆ, ಪರಮೇಶ್ವರ್, ಆಸ್ಕರ್ ಫರ್ನಾಂಡಿಸ್ ಮತ್ತು ಮುನಿಯಪ್ಪ ಅಭಿಪ್ರಾಯಕ್ಕೆ ಮಣೆ ಹಾಕಿ ಆಶ್ಚರ್ಯ ಮೂಡಿಸಿದ್ದಾರೆ.
ಬೆಂಗಳೂರು (ಮಾ. 13): ಕಳೆದ ಎರಡು ವರ್ಷಗಳಲ್ಲಿ ಮುಖ್ಯಮಂತ್ರಿ ಹೇಳಿದ್ದಕ್ಕೆಲ್ಲ ಕತ್ತು ಅಲುಗಾಡಿಸುತ್ತಿದ್ದ ರಾಹುಲ್ ಗಾಂಧಿ ಈ ಬಾರಿ ರಾಜ್ಯಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಹೇಳಿದ ಮೂರೂ ಹೆಸರುಗಳ ಬದಲಿಗೆ ಖರ್ಗೆ, ಪರಮೇಶ್ವರ್, ಆಸ್ಕರ್ ಫರ್ನಾಂಡಿಸ್ ಮತ್ತು ಮುನಿಯಪ್ಪ ಅಭಿಪ್ರಾಯಕ್ಕೆ ಮಣೆ ಹಾಕಿ ಆಶ್ಚರ್ಯ ಮೂಡಿಸಿದ್ದಾರೆ.
ರಾಜ್ಯಸಭಾ ಚುನಾವಣೆ ಅಭ್ಯರ್ಥಿ ಆಯ್ಕೆಗೆಂದು ದೆಹಲಿಗೆ ಬಂದಿದ್ದ ಸಿದ್ದರಾಮಯ್ಯನವರಿಗೆ ರಾಹುಲ್ ಗಾಂಧಿ ತಮ್ಮ ಗುರು ಸ್ಯಾಮ್ ಪಿತ್ರೋಡಾ ಅಥವಾ ಜನಾರ್ದನ್ ದ್ವಿವೇದಿ ಇಬ್ಬರಲ್ಲಿ ಒಬ್ಬರನ್ನು ಕರ್ನಾಟಕದಿಂದ ಕಳಿಸೋಣ ಎಂದಾಗ ಸ್ಪಷ್ಟವಾಗಿ ಇಲ್ಲ ಎಂದ ಸಿದ್ದು, ‘ಈಗಾಗಲೇ ಕರ್ನಾಟಕದ ಪ್ರತ್ಯೇಕ ಧ್ವಜ ಮಾಡಿದ್ದೇನೆ. ಹೊರಗಿನಿಂದ ಅಭ್ಯರ್ಥಿ ಕಳಿಸೋದು ಸರಿಯಾಗೋಲ್ಲ’ ಎಂದು ಹೇಳಿದ್ದರು. ಸರಿ ಎಂದ ರಾಹುಲ್, ಮುಖ್ಯಮಂತ್ರಿ ಕೊಟ್ಟ ಪಟ್ಟಿಯ ಬದಲಿಗೆ ಖರ್ಗೆ, ಪರಮೇಶ್ವರ್ ಮುನಿಯಪ್ಪ ಅಭಿಪ್ರಾಯ ಕೇಳಿದ್ದಾರೆ. ಕರ್ನಾಟಕ ಕಾಂಗ್ರೆಸಿನ ಒಟ್ಟಾರೆ ಪರಿಸ್ಥಿತಿಯಲ್ಲಿ ಅವರೂ ಅಸಮಾಧಾನ ಮಾಡಿಕೊಳ್ಳಬಾರದಲ್ಲ? ಖರ್ಗೆ ಶಾಮನೂರು ಶಿವಶಂಕರಪ್ಪ ಮತ್ತು ನಾಸಿರ್ ಹುಸೇನ್ ಬಳ್ಳಾರಿಯವರ ಹೆಸರು ಹೇಳಿದರೆ, ಪರಮೇಶ್ವರ್ ತಮ್ಮ ಪರಮಾಪ್ತ ಶಿಷ್ಯ ಜಿ ಸಿ ಚಂದ್ರಶೇಖರ್ ಒಬ್ಬರ ಹೆಸರನ್ನೇ ಹೇಳಿ ಬಂದಿದ್ದಾರೆ. ಇನ್ನು ಮುನಿಯಪ್ಪ ಎಂದಿನಂತೆ ದಲಿತ ಎಡ ವರ್ಗಕ್ಕೆ ಕೊಡಲೇಬೇಕು ಎಂದು ಬ್ಯಾಟಿಂಗ್ ಮಾಡಿ ಎಲ್.ಹನುಮಂತಯ್ಯ ಹೆಸರು ಹೇಳಿ ಬಂದಿದ್ದಾರೆ.
ಸಿದ್ದರಾಮಯ್ಯ ಒಂದು ಅಭ್ಯರ್ಥಿ ಲಿಂಗಾಯಿತ ಮಾಡಿ, ಎರಡನೇ ಅಭ್ಯರ್ಥಿಯಾಗಿ ಕೋಲಾರದ ನಸೀರ್ಗೆ ಕೊಡಿ ಮೂರನೇ ಅಭ್ಯರ್ಥಿಯಾಗಿ ತನ್ನ ಜೊತೆ ಬಹುವರ್ಷಗಳಿಂದ ಇರುವ ಚನ್ನಾರೆಡ್ಡಿಗೆ ಕೊಡಿ ಎಂದು ಕೇಳಿದ್ದರು. ಆದರೆ, ರಾಹುಲ್ ಗಾಂಧಿ, ಖರ್ಗೆ, ಮುನಿಯಪ್ಪ ಮತ್ತು ಪರಮೇಶ್ವರ್ ಹೇಳಿದವರಿಗೆ ಟಿಕೆಟ್ ಕೊಟ್ಟಿದ್ದಾರೆ. ಇದನ್ನೆಲ್ಲಾ ನೋಡಿದರೆ ವಿಧಾನಸಭಾ ಟಿಕೆಟ್ ಹಂಚಿಕೆಯಲ್ಲಿ ‘ಸಿದ್ದರಾಮಯ್ಯ ಹೇಳಿದವರಿಗೆಲ್ಲಾ ಟಿಕೆಟ್’ ಎಂಬ ನಂಬಿಕೆ ಏನಾಗಲಿದೆ ಎಂಬ ಕುತೂಹಲ ಮೂಡಿದೆ.
ದೆಹಲಿ ರಾಜಕಾರಣದ ಹೆಚ್ಚಿನ ಮಾಹಿತಿಗೆ ಇಂಡಿಯಾ ಗೇಟ್ ಕ್ಲಿಕ್ ಮಾಡಿ