ಮತ್ತೆ  ಇಬ್ಬರು  ಸಚಿವರ ನಡುವೆ ಜಟಾಪಟಿ ಭುಗಿಲೆದ್ದಿದೆ.  ಸಮ್ಮಿಶ್ರ ಸರ್ಕಾರದ ಸಿದ್ಧಾಂತಕ್ಕೆ ತಕ್ಕಂತೆ ನಡೆದುಕೊಳ್ಳಲು ಆಗದಿದ್ದರೆ ರಾಜೀನಾಮೆ ನೀಡಿ ಮನಗೆ ಹೋಗಲಿ ಎಂದು ಸಚಿವ ಪುಟ್ಟರಂಗಶೆಟ್ಟಿ ಶಿಕ್ಷಣ ಸಚಿವ ಮಹೇಶ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಬೆಂಗಳೂರು : ಕಾಂಗ್ರೆಸ್ ಗಿಡ ಕಿತ್ತು ಹಾಕುವೆ ಎಂಬ ಹೇಳಿಕೆ ನೀಡಿದ್ದ ಸಚಿವ ಮಹೇಶ್ ವಿರುದ್ಧ ಕೆಲದಿನಗಳ ಹಿಂದೆ ಹರಿಹಾಯ್ದಿದ್ದ ಸಚಿವ ಪುಟ್ಟರಂಗಶೆಟ್ಟಿ ಅವರು ಇದೀಗ ಮತ್ತೆ ವಾಗ್ದಾಳಿ ನಡೆಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಹೇಶ್ ತಮ್ಮ ಬೆಂಬಲ ಹಿಂಪಡೆದರೆ ಸಮ್ಮಿಶ್ರ ಸರ್ಕಾರ ಬೀಳುವುದಿಲ್ಲ. ಆದರೆ, ಕಾಂಗ್ರೆಸ್ ತನ್ನ ಬೆಂಬಲ ಹಿಂಪಡೆದರೆ ಸರ್ಕಾರ ಬೀಳಲಿದೆ ಎಂದು ಎಚ್ಚರಿಕೆ ನೀಡಿದರು. ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರು, ಮೂರು ಪಕ್ಷಗಳು ಸೇರಿ ಮಹೇಶ್‌ರನ್ನು ಶಿಕ್ಷಣ ಸಚಿವರನ್ನಾಗಿ ಮಾಡಿ ಇದೀಗ ಅದೇ ಸರ್ಕಾರದಲ್ಲಿದ್ದುಕೊಂಡು ಅದೇ ಪಕ್ಷವನ್ನು ಬೇರು ಸಹಿತ ಕಿತ್ತು ಹಾಕುತ್ತೇನೆ ಎಂದರೆ ಸುಮ್ಮನಿರಲು ಸಾಧ್ಯವೇ ಎಂದು ಗುಡುಗಿದರು. 

ಮಹೇಶ್‌ಗೆ ಸಚಿವ ಸ್ಥಾನವನ್ನು ಪುಟ್ಟರಂಗಶೆಟ್ಟಿ ನೀಡದಿದ್ದರೂ ಕಾಂಗ್ರೆಸ್ ಪಕ್ಷ ನೀಡಿದೆ. ಕಾಂಗ್ರೆಸ್ ಕೈಕೊಟ್ಟರೆ ಮಹೇಶ್ ಸಚಿವರಾಗಲು ಸಾಧ್ಯವೇ. ಸಮ್ಮಿಶ್ರ ಸರ್ಕಾರದಲ್ಲಿರುವವರು ಅದರ ಸಿದ್ಧಾಂತಕ್ಕೆ ತಕ್ಕಂತೆ ನಡೆದುಕೊಳ್ಳಬೇಕು. ಇಲ್ಲವಾದರೆ ರಾಜೀನಾಮೆ ಕೊಟ್ಟು ಹೋಗಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು.