ಮೂಲ್ಕಿ ಶೆಟ್ಟಿ ನಿವೃತ್ತಿಯಾದ್ದರಿಂದ ನೀಮೋ ಬ್ಯಾಂಕ್ ಹಗರಣ ಸ್ಫೋಟ!
ಪಂಜಾಬ್ ನ್ಯಾಷನಲ್ ಬ್ಯಾಂಕ್ನ (ಪಿಎನ್ಬಿ) ಮುಂಬೈ ಶಾಖೆಯೊಂದರಲ್ಲಿ 11500 ಕೋಟಿ ರು.ನಷ್ಟುಹಗರಣವಾಗಿರುವ ರಹಸ್ಯ ಸ್ಫೋಟ ಆಗಲು ಕಾರಣ ಬ್ಯಾಂಕಿನಲ್ಲಿ ಡೆಪ್ಯುಟಿ ಮ್ಯಾನೇಜರ್ ಆಗಿದ್ದ ದಕ್ಷಿಣ ಕನ್ನಡ ಜಿಲ್ಲೆ ಮೂಲ್ಕಿ ಮೂಲದ ಗೋಕುಲ್ದಾಸ್ ಶೆಟ್ಟಿನಿವೃತ್ತಿ ಆದದ್ದು!
ಮುಂಬೈ: ಪಂಜಾಬ್ ನ್ಯಾಷನಲ್ ಬ್ಯಾಂಕ್ನ (ಪಿಎನ್ಬಿ) ಮುಂಬೈ ಶಾಖೆಯೊಂದರಲ್ಲಿ 11500 ಕೋಟಿ ರು.ನಷ್ಟುಹಗರಣವಾಗಿರುವ ರಹಸ್ಯ ಸ್ಫೋಟ ಆಗಲು ಕಾರಣ ಬ್ಯಾಂಕಿನಲ್ಲಿ ಡೆಪ್ಯುಟಿ ಮ್ಯಾನೇಜರ್ ಆಗಿದ್ದ ದಕ್ಷಿಣ ಕನ್ನಡ ಜಿಲ್ಲೆ ಮೂಲ್ಕಿ ಮೂಲದ ಗೋಕುಲ್ದಾಸ್ ಶೆಟ್ಟಿನಿವೃತ್ತಿ ಆದದ್ದು!
ವಜ್ರೋದ್ಯಮಿ ನೀರವ್ ಮೋದಿಯ ಕಂಪನಿಯು ಇದೇ ಗೋಕುಲ್ದಾಸ್ ಶೆಟ್ಟಿಅವರಿಂದ ಲೆಟರ್ ಆಫ್ ಅಂಡರ್ಟೇಕಿಂಗ್ (ಅನುಮತಿ ಪತ್ರ) ಪಡೆಯುತ್ತಿತ್ತು. ಈ ಪತ್ರವನ್ನು ಬಳಸಿ ನೀರವ್ ಕಂಪನಿ ಬೇರೆ ಬ್ಯಾಂಕುಗಳಿಂದ ಹಣ ಪಡೆಯುತ್ತಿತ್ತು. ಆದರೆ, ಗೋಕುಲ್ದಾಸ್ ನಿವೃತ್ತರಾಗುತ್ತಿದ್ದಂತೆ ಆ ಜಾಗಕ್ಕೆ ಹೊಸ ಸಿಬ್ಬಂದಿ ಬಂದರು. ಅವರ ಬಳಿಯೂ ನೀರವ್ ಕಂಪನಿ ಅನುಮತಿ ಪತ್ರ ಕೇಳಿದಾಗ ಅನುಮಾನ ಬಂದು ಪರಿಶೀಲನೆ ನಡೆಸಿದರು. ಆಗ ಹಗರಣ ಬಯಲಾಯಿತು. ಇದೀಗ ನಿವೃತ್ತ ಗೋಕುಲ್ದಾಸ್ರನ್ನು ಸಿಬಿಐ ಬಂಧಿಸಿದೆ.
ಕಾಂಗ್ರೆಸ್ ಸಿಂಘ್ವಿಗೆ ನೀಮೋ ನಂಟು: ಬಿಜೆಪಿ ಆರೋಪ
‘ನೀರವ್ ಮೋದಿಗೂ ಕಾಂಗ್ರೆಸ್ ಮುಖಂಡ ಅಭಿಷೇಕ್ ಸಿಂಘ್ವಿ ಕುಟುಂಬಕ್ಕೂ ನಂಟು ಇದೆ’ ಎಂದು ಬಿಜೆಪಿ ಆರೋಪಿಸಿದೆ. ‘ನೀರವ್ ಒಡೆತನದ ಫೈರ್ಸ್ಟಾರ್ ಡೈಮಂಡ್ ಕಂಪನಿಗೆ ಅಭಿಷೇಕ್ ಸಿಂಘ್ವಿ ಪತ್ನಿ ಹಾಗೂ ಪುತ್ರ ನಿರ್ದೇಶಕರಾಗಿರುವ ಅದ್ವೈತ ಹೋಲ್ಡಿಂಗ್ ಕಂಪನಿಯ ಕಟ್ಟಡವನ್ನು ಲೀಸ್ಗೆ ನೀಡಲಾಗಿದೆ. ಈ ಕಟ್ಟಡವನ್ನು ಫೈರ್ಸ್ಟಾರ್ ಡೈಮಂಡ್ ಕಂಪನಿಯನ್ನು ಬಳಸುತ್ತಿತ್ತು ಕೂಡ’ ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಆರೋಪಿಸಿದ್ದಾರೆ.
ಪ್ರಧಾನಿ ಉತ್ತರ ನೀಡಲಿ: ರಾಹುಲ್ ಗಾಂಧಿ ಆಗ್ರಹ
ನೀಮೋ ಹಗರಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಉತ್ತರ ನೀಡಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ. ಅಲ್ಲದೆ, ದೇಶದ ಬ್ಯಾಂಕಿಂಗ್ ವ್ಯವಸ್ಥೆಯ ಭದ್ರವಾಗಿಡಲು ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳೇನು ಎಂಬುದನ್ನೂ ವಿವರಿಸುವಂತೆ ಒತ್ತಾಯಿಸಿದ್ದಾರೆ. ಇದಕ್ಕೂ ಮುನ್ನ ಸುದ್ದಿಗೋಷ್ಠಿ ನಡೆಸಿದ್ದ ಕಾಂಗ್ರೆಸ್ ನಾಯಕರು, ‘ನೀಮೋ ಹಗರಣ’ಕ್ಕೆ ಬಿಜೆಪಿಯೇ ಕಾರಣ. ಪ್ರಧಾನಿ ಮೋದಿ ಅವರು ‘ಸ್ನೇಹಿತರ ಹೂಡಿಕೆ’ಗೆ ಒತ್ತು ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.