ಪಿಎನ್ಬಿ ಹಗರಣ: ರಾಜಕೀಯ ಪಕ್ಷಗಳ ಕೆಸರೆರೆಚಾಟ
ಪಿಎನ್ಬಿಯಲ್ಲಿ ನಡೆದ 11,400 ಕೋಟಿ ರು. ಹಗರಣ ಇದೀಗ ರಾಜಕೀಯ ಪಕ್ಷಗಳ ಮಧ್ಯೆ ಕೆಸರೆರೆಚಾಟಕ್ಕೆ ಕಾರಣವಾಗಿದೆ. ಲೂಟಿ ಮತ್ತು ಪರಾರಿ ಮೋದಿ ಸರ್ಕಾರದ ಹೆಗ್ಗುರುತಾಗಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.
ನವದೆಹಲಿ: ಪಿಎನ್ಬಿಯಲ್ಲಿ ನಡೆದ 11,400 ಕೋಟಿ ರು. ಹಗರಣ ಇದೀಗ ರಾಜಕೀಯ ಪಕ್ಷಗಳ ಮಧ್ಯೆ ಕೆಸರೆರೆಚಾಟಕ್ಕೆ ಕಾರಣವಾಗಿದೆ. ಲೂಟಿ ಮತ್ತು ಪರಾರಿ ಮೋದಿ ಸರ್ಕಾರದ ಹೆಗ್ಗುರುತಾಗಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.
‘ಭಾರತವನ್ನು ಲೂಟಿ ಮಾಡುವುದು ಹೇಗೆಂದು ನೀರವ್ ಮೋದಿ ತೋರಿಸಿಕೊಟ್ಟಿದ್ದಾರೆ. ಮೊದಲು ಮೋದಿ ಅವರನ್ನು ಅಪ್ಪಿಕೊಳ್ಳಿ. ಬಳಿಕ ಅವರ ಜೊತೆ ದಾವೋಸ್ನಲ್ಲಿ ಕಾಣಿಸಿಕೊಳ್ಳಿ. 12,000 ಕೋಟಿ ರು.ನೊಂದಿಗೆ ಮಲ್ಯ ರೀತಿಯಲ್ಲಿ ದೇಶವನ್ನು ಬಿಟ್ಟು ಪರಾರಿಯಾಗಿ’ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ. ಜೊತೆಗೆ ಕಾಂಗ್ರೆಸ್ ನಾಯಕರು ನೀರವ್ ಮೋದಿ ಚೋಟಾ ಮೋದಿ ಎನ್ನುವ ಮೂಲಕ ಪರೋಕ್ಷವಾಗಿ ಪ್ರಧಾನಿ ಮೋದಿಗೆ ಹೋಲಿಸಿದ್ದಾರೆ.
ಇದೇ ವೇಳೆ, ಎಡಪಕ್ಷಗಳು, ಟಿಎಂಸಿ, ಆಮ್ಆದ್ಮಿ ಪಕ್ಷಗಳು, ಪಿಎನ್ಬಿ ಹಗರಣಕ್ಕೆ ಸಂಬಂಧಿಸಿದಂತೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ದಾವೋಸ್ನಲ್ಲಿ ಭಾರತೀಯ ಸಿಇಒಗಳ ಜೊತೆ ನೀರವ್ ಮೋದಿ ಕಾಣಿಸಿಕೊಂಡಿದ್ದು ಹೇಗೆ ಎಂಬ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿವೆ.
ರವಿಶಂಕರ್ ಸ್ಪಷ್ಟನೆ: ವಿಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ನೀರವ್ ದಾವೋಸ್ನಲ್ಲಿ ಪ್ರಧಾನಿ ಮೋದಿ ನಿಯೋಗದ ಭಾಗವಾಗಿರಲಿಲ್ಲ. ತಾವಾಗಿಯೇ ಅಲ್ಲಿಗೆ ಬಂದಿದ್ದರು. ಜೊತೆಗೆ ನೀರವ್ರನ್ನು ಮೋದಿ ಭೇಟಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜೊತೆಗೆ ನೀರವ್ರನ್ನು ಚೋಟಾ ಮೋದಿ ಎಂದು ಬಣ್ಣಿಸುವ ಮೂಲಕ ಮೋದಿಗೆ ಹೋಲಿಸಿದ್ದು ಕೀಳುತನ ಎಂದು ಕಿಡಿಕಾರಿದ್ದಾರೆ.