ಮಡದಿಗೆ ಕೊಟ್ಟ ಆ ಮಾತು ಈಡೇರಿಸುವ ಮುನ್ನವೇ ನಡೆಯಿತು ಘೋರ ದುರಂತ!
ರಾಮ್ ವಕೀಲ್, 5 ದಿನಗಳ ಹಿಂದಷ್ಟೇ ರಜೆ ಮುಗಿಸಿ ದೇಶದ ಸೇವೆಗೆಂದು ಮರಳಿದ್ದರು. ಆದರೆ ಹೋಗುವುದಕ್ಕೂ ಮೊದಲು ಮಡದಿಗೆ ಮಾತೊಂದನ್ನು ನೀಡುತ್ತಾ ತಾನು ಕೊಟ್ಟ ಕನಸನ್ನು ಮುಂದಿನ ಬಾರಿ ಬಂದಾಗ ಈಡೇಸುತ್ತೇನೆ ಎಂದಿದ್ದರು. ಆದರೀಗ ಉಗ್ರರ ಪಾಪಿ ಕೃತ್ಯಕ್ಕೆ ಬಲಿಯಾಗಿದ್ದಾರೆ, ಗಂಡ ಬರುತ್ತಾನೆ ಎಂದು ಕಾಯುತ್ತಿದ್ದ ಹೆಂಡತಿ ವಿಧವೆಯಾಗಿದ್ದರೆ, ತಂದೆಗೇನಾಗಿದೆ ಎಂದು ತಿಳಿಯದ ಮಕ್ಕಳು ಮೌನ ತಾಳಿದ್ದಾರೆ.
ಲಕ್ನೋ[ಫೆ.15]: ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರು ನಡೆಸಿದ ದಾಳಿಯ ಬಳಿಕ ಹುತಾತ್ಮರ ಮನೆಯಲ್ಲಿ ಶೋಕ ಮಡುಗಟ್ಟಿದೆ. ಹುತಾತ್ಮರಲ್ಲಿ ಒಬ್ಬರಾದ ಇಟಾವಾದ ರಾಮ್ ವಕೀಲ್ ಕುಟುಂಬಸ್ಥರ ನೋವು ಕೂಡಾ ಹೇಳತೀರದು. ಇದೇ ತಿಂಗಳಲ್ಲಿ ಮನೆಗೆ ಹೋಗಿದ್ದ ರಾಮ್ ವಕೀಲ್ ಫೆ. 10 ರಂದು ರಜೆ ಮುಗಿಸಿ ದೇಶ ಸೇವೆಗೆಂದು ಪುಲ್ವಾಮಗೆ ಹೊರಟು ನಿಂತಿದ್ದರು. ಈ ವೇಳೆ ಮುದ್ದಿನ ಮಡದಿ ಬಳಿ ಶೀಘ್ರದಲ್ಲೇ ಮತ್ತೊಮ್ಮೆ ರಜೆ ಪಡೆದು ಮರಳುತ್ತೇನೆ ಹಾಗೂ ಒಂದು ಮನೆ ಕಟ್ಟಿಸುತ್ತೇನೆ ಮಾತು ಕೊಟ್ಟಿದ್ದರು. ಆದರೆ ಕೊನೆಗೂ ರಾಮ್ ವಕೀಲ್ ರವರ ಈ ಕನಸು ನನಸಾಗಲೇ ಇಲ್ಲ.
ಭಾರತ ಒಡೆಯುವುದು ಅಸಾಧ್ಯ, ಸರ್ಕಾರದೊಂದಿಗೆ ನಾವಿದ್ದೇವೆ: ರಾಹುಲ್ ಗಾಂಧಿ
ರಾಮ್ ವಕೀಲ್ ಮನೆಯಲ್ಲಿ ಅವರ ಪತ್ನಿ ಗೀತಾ ಹೊರತುಪಡಿಸಿ ಮೂವರು ಚಿಕ್ಕ ಪುಟ್ಟ ಮಕ್ಕಳಿದ್ದಾರೆ. ಖುಷಿ ಖುಷಿಯಾಗಿದ್ದ ಈ ಕುಟುಂಬಕ್ಕೆ ಶುಕ್ರವಾರದಂದು ರಾಮ್ ವಕೀಲ್ ಹುತಾತ್ಮರಾಗಿರುವ ಸುದ್ದಿ ಬರಸಿಡಿಲಿನಂತೆರಗಿದ್ದು, ಮನೆಯಲ್ಲಿ ಶೋಕದ ವಾತಾವರಣ ಮಡುಗಟ್ಟಿದೆ. ಮೂಲಥಃ ವಿನಾಯಕಪುರದವರಾಗಿದ್ದ ರಾಮ್ ವಕೀಲ್ ಇತ್ತೀಚೆಗಷ್ಟೇ ಇಟಾವಾಗೆ ಶಿಫ್ಟ್ ಆಗಿದ್ದರು. ಆದರೀಗ ಇವರೆಲ್ಲರ ಕನಸು ನುಚ್ಚು ನೂರಾಗಿದೆ, ಯೋಧನೊಬ್ಬ ಉಗ್ರರು ನಡೆಸಿರುವ ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ.
ಹಲವು ದಿನಗಳ ಹಿಂದೆಯೇ ಗುಪ್ತಚರ ಸಂಘಟನೆಗಳಿಂದ ಎಚ್ಚರಿಕೆ
ದೇಶದಾದ್ಯಂತ ಈ ದಾಳಿಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದು, ಉಗ್ರರನ್ನು ಹಾಗೂ ಭಯೋತ್ಪಾದಕ ಸಂಘಟನೆಗಳಿಗೆ ತಕ್ಕ ಪಾಠ ಕಲಿಸಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ. ಇತ್ತ ಪ್ರತಿಪಕ್ಷಗಳೂ ದಾಳಿ ವಿಚಾರದಲ್ಲಿ ರಾಜಕೀಯವನ್ನು ಬದಿಗೊತ್ತಿ ಕೇಂದ್ರ ಸರ್ಕಾರಕ್ಕೆ ಬೆಂಬಲ ನೀಡುವುದಾಗಿ ಘೋಷಿಸಿವೆ. ವಿಶ್ವದೆಲ್ಲೆಡೆ ಉಗ್ರರ ಈ ಕೃತ್ಯಕ್ಕೆ ಆಕ್ರೋಶ ವ್ಯಕ್ತವಾಗಿದೆ. ಇತ್ತ ದೇಶವನ್ನುದ್ದೆಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಕೂಡಾ ಉಗ್ರರು ಬಹುದೊಡ್ಡ ತಪ್ಪು ಮಾಡಿದ್ದು, ತಕ್ಕ ಶಿಕ್ಷೆ ನೀಡುತ್ತೇವೆ ಎಂಬ ಎಚ್ಚರಿಕೆ ನೀಡಿದ್ದಾರೆ.