ಪುಲ್ವಾಮಾ ದಾಳಿಕೋರ ಆ 10ನೇ ಕ್ಲಾಸ್ ಉಗ್ರ ಹೇಳಿದ್ದೇನು..?
ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿನ ಸಿಆರ್ಪಿಎಫ್ ಕ್ಯಾಂಪ್ ಮೇಲೆ ದಾಳಿ ಮಾಡಿ 5 ಯೋಧರನ್ನು ಕೊಂದ ಭಯೋತ್ಪಾದಕರಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದ ಉಗ್ರ ಕೂಡ ಇದ್ದ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ಶ್ರೀನಗರ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿನ ಸಿಆರ್ಪಿಎಫ್ ಕ್ಯಾಂಪ್ ಮೇಲೆ ದಾಳಿ ಮಾಡಿ 5 ಯೋಧರನ್ನು ಕೊಂದ ಭಯೋತ್ಪಾದಕರಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದ ಉಗ್ರ ಕೂಡ ಇದ್ದ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ವಿಚಿತ್ರವೆಂದರೆ ಸುಮಾರು 16 ವರ್ಷ ವಯಸ್ಸಿನ ಈತನ ತಂದೆ ಜಮ್ಮು-ಕಾಶ್ಮೀರ ಪೊಲೀಸ್ ಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇಂಥವರ ಮಕ್ಕಳೇ ಈಗ ಉಗ್ರವಾದದ ಸೆಳೆತಕ್ಕೆ ಒಳಗಾಗುತ್ತಿದ್ದಾರೆ ಎಂಬುದು ಕಳವಳಕಾರಿಯಾಗಿದೆ. ದಾಳಿಯಲ್ಲಿ ಪಾಲ್ಗೊಂಡ ಎಲ್ಲ ಉಗ್ರರೂ ಕಾಶ್ಮೀರಿಗಳು.
ಈ ನಡುವೆ ಹತ್ಯೆಗೂ ಕೆಲವೇ ಹೊತ್ತಿನ ಮುನ್ನ 10ನೇ ತರಗತಿ ಬಾಲಕ ಫರ್ದೀನ್ ಅಹ್ಮದ್ ಮಾಡಿದ್ದ ವಿಡಿಯೋವೊಂದು ಇದೀಗ ಭಾರೀ ವೈರಲ್ ಆಗಿದೆ. ಆ ವಿಡಿಯೋದಲ್ಲಿ ‘ನಾನಿನ್ನು ಕೆಲವೇ ಹೊತ್ತಿನಲ್ಲೇ ಸ್ವರ್ಗದಲ್ಲಿ ದೇವರ ಪಾದ ಸೇರುತ್ತೇನೆ. ನನ್ನಂತೆ ನೀವೂ ಕೂಡಾ ಜಿಹಾದ್ನಲ್ಲಿ ತೊಡಗಿಸಿಕೊಳ್ಳಿ’ ಎಂದು ಕರೆ ನೀಡುವ ಅಂಶಗಳಿವೆ.
ವಿಡಿಯೋದಲ್ಲಿ ಫರ್ದೀನ್ ಹೇಳಿದ್ದೇನು : ‘ಕಾಶ್ಮೀರದಲ್ಲಿ ಉಗ್ರವಾದದ ಹೆಚ್ಚುವುದಕ್ಕೆ ಭಾರತ ಪ್ರತಿಪಾದಿಸಿರುವಂತೆ ನಿರುದ್ಯೋಗ ಕಾರಣವಲ್ಲ. ಕಾಶ್ಮೀರ ಹಿಂಸಾಚಾರ, ಭಾರತದ ಅತಿಕ್ರಮಣಕ್ಕೆ ಪ್ರತಿಕ್ರಿಯೆಯಾಗಿದೆ. ಧರ್ಮ ನಿಂದಕರು ನಮ್ಮ ಭೂಮಿ ಆಕ್ರಮಿಸಿದ್ದಾರೆ, ಹೀಗಾಗಿ ಜಿಹಾದ್ ನಮ್ಮ ಕರ್ತವ್ಯವಾಗಬೇಕಾಗಿದೆ.
ಕಾಶ್ಮೀರದ ಯುವಕರು ನಿಮ್ಮ ಕರ್ತವ್ಯವನ್ನು ದಯಮಾಡಿ ಅರ್ಥಮಾಡಿಕೊಳ್ಳಿ ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡಿ’ ಎಂದು ಎಂಟು ನಿಮಿಷಗಳ ವೀಡಿಯೊದಲ್ಲಿ ಫರ್ದೀನ್ ವಿನಂತಿಸಿದ್ದಾನೆ. ಬಾಬರಿ ಮಸೀದಿ ನಾಶ, ಪಠಾಣ್ಕೋಟ್, ಪುಲ್ವಾಮ ಪೊಲೀಸ್ ಲೈನ್ಗಳ ಮೇಲೆ ನಡೆದ ದಾಳಿಗಳ ಬಗ್ಗೆ ಆತ ಮಾತನಾಡಿದ್ದಾನೆ.
ಅಲ್ಲದೆ ಭಾರತದ ಮುಸ್ಲಿಮರು ಉಗ್ರವಾದಿಗಳೊಂದಿಗೆ ಜೊತೆಗೂಡುವಂತೆ ಆತ ಕೋರಿದ್ದಾನೆ. ‘ಕಣಿವೆ ರಾಜ್ಯದಲ್ಲಿ ಜೈಶೆ ಮುಹಮ್ಮದ್ ನಾಶವಾಗಿದೆ ಎಂದು ಪದೇಪದೇ ಹೇಳಲಾಗುತ್ತಿದೆ. ಆದರೆ ಜೈಶೆ ಮುಹಮ್ಮದ್ ಅನ್ನು ಈಗ ನಿಲ್ಲಿಸಲು ಅಸಾಧ್ಯ ಎಂದು ನಾನು ಎಲ್ಲರಿಗೂ ತಿಳಿಸುತ್ತಿದ್ದೇನೆ’ ಎಂದು ಫರ್ದೀನ್ ಹೇಳಿದ್ದಾನೆ.