ಸಿಎಂ ರಾಜೀನಾಮೆ ಪಡೆಯಲು ಜನರಿಂದಲೇ ಪ್ರತಿಭಟನೆ
ತೀವ್ರ ಅನಾರೋಗ್ಯಕ್ಕೆ ಗುರಿಯಾಗಿರುವ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ರಾಜೀನಾಮೆಗೆ ಒತ್ತಾಯಿಸಿ ರಾಜ್ಯದ ಜನರೇ ಪ್ರತಿಭಟನೆ ಆರಂಭಿಸಿದ್ದಾರೆ. ಮುಖ್ಯಮಂತ್ರಿ ರಾಜೀನಾಮೆ ಪಡೆಯದ ರಾಜ್ಯಪಾಲೆ ಮೃದುಲ ಸಿನ್ಹಾ ಅವರ ವಿರುದ್ಧವೂ ಹೋರಾಟ ಮಾಡಲು ನಿರ್ಧರಿಸಿದ್ದಾರೆ.
ಪಣಜಿ[ನ.24] ವಿರೋಧ ಪಕ್ಷದವರು ಅಧಿಕಾರದಲ್ಲಿ ಇರುವವರ ರಾಜೀನಾಮೆ ಕೇಳುವುದು ಸಾಮಾನ್ಯ. ಆದರೆ ಇಲ್ಲಿ ಜನರೇ ಸಿಎಂ ರಾಜೀನಾಮೆಗೆ ಆಗ್ರಹ ಮಾಡುತ್ತಿದ್ದಾರೆ.
ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ರಾಜೀನಾಮೆಗೆ ಒತ್ತಾಯಿಸಿ ನೂರಾರು ಗೋವಾ ನಾಗರಿಕರು ಕಳೆದ ಬುಧವಾರ ಸಿಎಂ ನಿವಾಸದವರೆಗ ಪ್ರತಿಭಟನಾ ಮೆರವಣಿಗೆ ನಡೆಸಿದ್ದರು. ಈಗ ಮತ್ತೆ ಪ್ರತಿಭಟನೆ ತೀವ್ರಗೊಳಿಸಲು ನಿರ್ಧರಿಸಿದ್ದು, ಇದಕ್ಕೆ ಪ್ರತಿಪಕ್ಷ ಕಾಂಗ್ರೆಸ್, ಶಿವಸೇನಾ ಹಾಗೂ ಎನ್ ಸಿಪಿ ಸಹ ಬೆಂಬಲ ನೀಡಿದ್ದು ಹೋರಾಟ ತೀವ್ರವಾಘುವ ಲಕ್ಷಣ ಕಂಡುಬಂದಿದೆ.
ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಸಿಎಂ ಪರಿಕ್ಕರ್ ಅವರು ಕಳೆದ 9 ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದ ಆಡಳಿತ ಸಂಪೂರ್ಣ ಸ್ಥಗಿತಗೊಂಡಿದೆ. ಇಂತಹ ಪರಿಸ್ಥಿತಿಯಲ್ಲ ಮಧ್ಯ ಪ್ರವೇಶಿಸಬೇಕಾದ ರಾಜ್ಯಪಾಲರು ಯಾವುದೆ ಪರ್ಯಾಯ ಆಲೋಚನೆ ಮಾಡುತ್ತಿಲ್ಲ ಎಂದು ನಾಗರಿಕ ಆಂದೋಲನದ ಮುಖಂಡ ಐರೀಸ್ ರೋಡ್ರಿಗಸ್ ಆರೋಪಿಸಿದ್ದಾರೆ.
ಇನ್ನೊಂದು ಕಡೆ ಮುಖ್ಯಮಂತ್ರಿ ಪರಿಕ್ಕರ್ ರಾಜೀನಾಮೆಗೆ ಒತ್ತಾಯಿಸಿ ಆರ್ ಟಿಐ ಕಾರ್ಯಕರ್ತ ರಾಜನ್ ಘಾಟೆ ಅವರು ಕಳೆದ ಎಂಟು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಪರಿಕ್ಕರ್ ರಾಜೀನಾಮೆ ನೀಡಲು ಸಿದ್ಧವಾಗಿದ್ದರೂ ಬಿಜೆಪಿ ನಾಯಕರೇ ತಡೆಯುತ್ತಿದ್ದಾರೆ ಎಂಬ ಮಾತು ಕೇಳಿ ಬಂದಿದೆ.