ಈಡೇರಿಸಬಹುದಾದ ಕನಸು ಮಾತ್ರ| ತೋರಿಸಿ: ಮೋದಿಗೆ ಗಡ್ಕರಿ ಟಾಂಗ್‌|  ಪ್ರಧಾನಿ ಹೆಸರು ಹೇಳದೆಯೇ ಸಚಿವ ಗಡ್ಕರಿ ಟೀಕೆ

ಮುಂಬೈ[ಜ.28]: ಇತ್ತೀಚಿನ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ವಿರುದ್ಧ ಪದೇ ಪದೇ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸುತ್ತಿರುವ ಕೇಂದ್ರ ಸಚಿವ ನಿತಿನ್‌ ಗಡ್ಕರಿ, ಭಾನುವಾರ ಮತ್ತೆ ಅದೇ ಕೆಲಸ ಮಾಡಿದ್ದಾರೆ. ಇದು ಸಾಕಷ್ಟುಚರ್ಚೆ ಮತ್ತು ಕುತೂಹಲಕ್ಕೆ ಕಾರಣವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಲ್ಲಿ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಿದ ಗಡ್ಕರಿ, ‘ತಮಗೆ ಕನಸು ತೋರಿಸುವ ನಾಯಕರನ್ನು ಜನ ಇಷ್ಟಪಡುತ್ತಾರೆ ಆದರೆ ಅದೇ ಕನಸುಗಳು ಈಡೇರದೇ ಹೋಯಿತು ಎಂದಾದಾಗ ಅವರನ್ನು ಶಿಕ್ಷಿಸಲೂ ಹಿಂಜರಿಯುವುದಿಲ್ಲ. ಹೀಗಾಗಿ ಯಾವ ಕನಸುಗಳನ್ನು ಈಡೇರಿಸಲು ಸಾಧ್ಯವೋ ಅದನ್ನು ಮಾತ್ರ ತೋರಿಸಬೇಕು. ಇದೇ ಕಾರಣಕ್ಕಾಗಿಯೇ ನನ್ನ ಬಳಿ ಯಾವುದೋ ಸಾಧ್ಯವೋ ಆ ಕನಸುಗಳನ್ನು ಮಾತ್ರವೇ ಜನರಿಗೆ ತೋರಿಸುತ್ತೇನೆ ಮತ್ತು ಅದನ್ನು ಸಾಧಿಸಿ ತೋರಿಸುತ್ತೇನೆ’ ಎಂದು ಹೇಳಿದ್ದಾರೆ. ಈ ವೇಳೆ ಗಡ್ಕರಿ ನೇರವಾಗಿ ಎಲ್ಲೂ ಯಾರ ಹೆಸರೂ ಹೇಳದಿದ್ದರೂ, ಇದು ಮೋದಿ ಉದ್ದೇಶಿಸಿಯೇ ಆಡಿದ ಮಾತು ಎಂದು ವಿಶ್ಲೇಷಿಸಲಾಗಿದೆ.

ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ಚುನಾವಣೆಯಲ್ಲಿ ಬಿಜೆಪಿ ಮುಗ್ಗರಿಸಿದ ಬಳಿಕ ಬಿಜೆಪಿ ನಾಯಕತ್ವದ ವಿರುದ್ಧ ಗಡ್ಕರಿ ಅಸಮಾಧಾನ ವ್ಯಕ್ತಪಡಿಸಿದ್ದರು. ಗೆದ್ದಾಗ ಅದರ ಯಶಸ್ಸನ್ನು ಹೊರುವ ನಾಯಕರು ಸೋಲಿನ ಹೊಣೆಯನ್ನೂ ಹೊರಬೇಕು ಎಂದು ಟೀಕಿಸಿದ್ದರು.