ಖಾಸಗಿ ಬಸ್ ಟಿಕೆಟ್ ದರ್ಬಾರ್, ಹೈಕೋರ್ಟ್ ಹೇಳಿದ್ದು ಹೀಗೆ
ಹಬ್ಬ-ಹರಿದಿನಗಳು ಎದುರಾದಾಗ ಖಾಸಗಿ ಬಸ್ ಸಂಸ್ಥೆಗಳು ಜನರಿಂದ ಹಣ ಸುಲಿಗೆ ಮಾಡಲು ಆರಂಭಿಸಿ ಅನೇಕ ವರ್ಷಗಳೆ ಕಳೆದು ಹೋಗಿವೆ. ಇದಕ್ಕೆ ಕಡಿವಾಣ ಹಾಕಲು ಸಲ್ಲಿಸಿದ್ದ ಅರ್ಜಿಯೊಂದನ್ನು ಹೈಕೋರ್ಟ್ ವಜಾ ಮಾಡಿದೆ.
ಬೆಂಗಳೂರು(ಡಿ.19) ಖಾಸಗಿ ಬಸ್ ಗಳು ಏಕಾಏಕಿ ಬಸ್ ರೇಟ್ ಜಾಸ್ತಿ ಮಾಡುವ ಸಂಬಂಧ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಯನ್ನು ಹೈ ಕೋರ್ಟ್ ದ್ವೀಸದಸ್ಯ ಪೀಠ ವಜಾ ಮಾಡಿದೆ.
ಯಾವ ಮಾನದಂಡದಡಿ ಪ್ರಯಾಣ ದರ ಹೆಚ್ಚು ಮಾಡುತ್ತಾರೆ ಎಂಬುದನ್ನು ಪರಿಶೀಲಿಸಬೇಕು ಎಂದು ಪಿಐಎಲ್ ಸಲ್ಲಿಸಲಾಗಿತ್ತು. ಸಾರಿಗೆ ಇಲಾಖೆಗೆ ಈ ಬಗ್ಗೆ ಕ್ರಮ ತೆಗೆದುಕೊಳ್ಳಲು ಸೂಚಿಸಬೇಕು ಎಂದು ಕೇಳಲಾಗಿತ್ತು.
ಸಾಯಿದತ್ತ ಎಂಬುವವರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಮತ್ತು ನ್ಯಾಯಮೂರ್ತಿ ಎಸ್. ಸುಜಾತಾ ಒಳಗೊಂಡ ಪೀಠದಲ್ಲಿ ವಿಚಾರಣೆ ಬುಧವಾರ ನಡೆಯಿತು.
ಖಾಸಗಿ ಬಸ್ ಗಳ ಟಿಕೆಟ್ ದರ ದುಪ್ಪಟ್ಟು ಏರಿಕೆ
ಬಸ್ ದರ್ ಏಕಾಏಕಿ ಏರಿಕೆ ಮಾಡುವುದನ್ನು ಸಂಬಂಧಿಸಿದವರ ಗಮನಕ್ಕೆ ತಂದು ವರದಿ ಸಿದ್ಧಮಾಡಲು ನ್ಯಾಯಾಲಯ ಸೂಚಿಸಿತು. ಒಂದು ವೇಳೆ ಯಾವುದೆ ಕ್ರಮ ತೆಗೆದುಕೊಳ್ಳದಿದ್ದರೆ ಪಿಐಎಲ್ ಸಲ್ಲಿಸಬಹುದು ಎಂದು ಹೇಳಿತು. ಇದೇ ಸೂಚನೆಯನ್ನು ಅರ್ಜಿದಾರರ ಪರ ವಕೀಲ ರಮೇಶ್ ಚಂದ್ರಗೆ ಹೈಕೋರ್ಟ್ ನೀಡಿತು.
ಹಬ್ಬದ ಸಂದರ್ಭದಲ್ಲಿ ಸುವರ್ಣ ನ್ಯೂಸ್ ಬಸ್ ದರ ಬೇಕಾಬಿಟ್ಟಿ ಏರಿಕೆ ಮಾಡಿರುವ ಕುರಿತು ಸಮಗ್ರ ವರದಿ ಬಿತ್ತರ ಮಾಡಿತ್ತು. ಬಸ್ ದರ ಏರಿಕೆಯ ಪ್ರತಿಯೊಂದು ಅಂಶಗಳನ್ನು ಸಾರ್ವಜನಿಕರ ಗಮನಕ್ಕೆ ತರಲಾಗಿತ್ತು. ಇದಾದ ಮೇಲೆ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿತ್ತು.