ರಾಜ್ಯ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸಭೆಗಳು ಇಂದೂ ಮುಂದುವರಿಯಲಿವೆ. ಈ ಮಧ್ಯೆ ಆದಿಚುಂಚನಗಿರಿ ಮಠ ಮತ್ತು ಆರ್ಟ್ ಆಫ್ ಲೀವಿಂಗ್ ಆಶ್ರಮಕ್ಕೂ ಷಾ ಭೇಟಿ ನೀಡಲಿದ್ದಾರೆ.

ಬೆಂಗಳೂರು(ಆ.13): ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪ್ರವಾಸ ಕಾರ್ಯಕ್ರಮ ಇವತ್ತು ಕೂಡಾ ಮುಂದುವರಿಯಲಿದೆ. ಬೆಳಗ್ಗೆ ರಾಜ್ಯ ಬಿಜೆಪಿ ಕಚೇರಿಯಲ್ಲಿ ರಾಜಕೀಯ ವ್ಯವಹಾರಗಳ ಸಮಿತಿ ಸಭೆ ನಡೆಸಲಿರುವ ಅಮಿತ್ ಷಾ, ಬಳಿಕ ನೇರವಾಗಿ ನಾಗಮಂಗಲ ತಾಲೂಕಿನಲ್ಲಿರುವ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಲಿದ್ದಾರೆ. ಆದಿಚುಂಚನಗಿರಿಯಲ್ಲಿ ಎರಡು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿರುವ ಅಮಿತ್ ಶಾ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದು, ಮಠದಲ್ಲಿ ನಡೆಯುವ ಪೂಜಾ ಕಾರ್ಯಕ್ರಮದಲ್ಲಿ ಕೂಡಾ ಭಾಗವಹಿಸಲಿದ್ದಾರೆ.

ಇನ್ನು ಸಂಜೆ ತುಮಕೂರು ರಸ್ತೆಯಲ್ಲಿರುವ ಜಿಂದಾಲ್ ಕನ್ವೆನ್ಷನ್ ಸೆಂಟರ್​ನಲ್ಲಿ ಬಿಜೆಪಿ ವಿಸ್ತಾರಕರ ಸಭೆಯನ್ನು‌ ನಡೆಸಲಿದ್ದಾರೆ. ಬಳಿಕ ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲೀವಿಂಗ್ ಆಶ್ರಮಕ್ಕೆ ಭೇಟಿ ನೀಡಲಿದ್ದು, ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ರಾತ್ರಿ ಬೆಂಗಳೂರಿನ ಜಯನಗರದಲ್ಲಿರುವ ಆರ್​ಎಸ್​ಎಸ್​​ ಮುಖಂಡರೊಬ್ಬರ ನಿವಾಸಕ್ಕೂ ಶಾ ಭೇಟಿ‌ ನೀಡಲಿದ್ದಾರೆ ಎನ್ನಲಾಗಿದೆ.

ಒಟ್ಟಾರೆ ಮೂರು ದಿನಗಳ ಪ್ರವಾಸದಲ್ಲಿ ಪಕ್ಷ ಬಲವರ್ಧನೆಗೆ ಅಮಿತ್ ಷಾ ಬತ್ತಳಿಕೆಯಿಂದ ಇನ್ನಷ್ಟು ಸಂಘಟನಾಸ್ತ್ರಗಳು ಹೊರಬರುವ ನಿರೀಕ್ಷೆಯಿದೆ.

ವರದಿ: ಕಿರಣ್ ಹನಿಯಡ್ಕ, ಸುವರ್ಣ ನ್ಯೂಸ್