ಮುಂಗಾರುಪೂರ್ವ ಮಳೆ ಕೊರತೆ: ರಾಜ್ಯ ಧಗಧಗ
123 ಮಿ.ಮೀ. ವಾಡಿಕೆ ಮಳೆ ಬದಲು ಸುರಿದಿದ್ದು ಕೇವಲ 78 ಮಿ.ಮೀ. | ಉಷ್ಣಾಂಶ ಇಳಿಕೆಯಾಗದೆ ಜನರಿಗೆ ಸಂಕಷ್ಟ |
ಬೆಂಗಳೂರು (ಜೂ. 03): ಈ ಬಾರಿಯ ಮುಂಗಾರು ಪೂರ್ವ ಅವಧಿಯಲ್ಲಿ (ಮಾರ್ಚ್-ಮೇ) ಮಳೆ ಕೊರತೆ ಉಂಟಾಗಿರುವುದರಿಂದ ರಾಜ್ಯದಲ್ಲಿ ಉಷ್ಣಾಂಶದ ಪ್ರಮಾಣ ನಿರೀಕ್ಷಿತ ಮಟ್ಟದಲ್ಲಿ ಇಳಿಕೆಯಾಗಿಲ್ಲ.
ಮಳೆ ಕೊರತೆ ಎದುರಿಸುತ್ತಿರುವ ಕರಾವಳಿ, ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳು ಬಿಸಿಲ ತಾಪದಿಂದ ಧಗಧಗಿಸುತ್ತಿವೆ. ವಾಡಿಕೆಯಂತೆ ಮಾರ್ಚ್ನಿಂದ ಮೇ ಅವಧಿಯಲ್ಲಿ ರಾಜ್ಯದಲ್ಲಿ 123 ಮಿ.ಮೀ. ವಾಡಿಕೆ ಮಳೆಯಾಗಬೇಕು. ಆದರೆ, 77.9 ಮಿ.ಮೀ ಮಾತ್ರ ಮಳೆಯಾಗಿದ್ದು, ಶೇ.37 ರಷ್ಟು ಮಳೆ ಕೊರತೆ ಉಂಟಾಗಿದೆ. ಉತ್ತರ ಕರ್ನಾಟಕದ 11 ಜಿಲ್ಲೆಗಳಲ್ಲಿ ಶೇ.50 ರಷ್ಟು, ಕರಾವಳಿ ಭಾಗದ 3 ಜಿಲ್ಲೆಗಳಲ್ಲಿ ಶೇ 75 ರಷ್ಟು ಹಾಗೂ ದಕ್ಷಿಣ ಒಳನಾಡಿನ 16 ಜಿಲ್ಲೆಗಳಲ್ಲಿ ಶೇ.21 ರಷ್ಟು ಮಳೆ ಕೊರತೆ ಉಂಟಾಗಿದೆ. ಹೀಗಾಗಿ ಉಷ್ಣಾಂಶ ಇಳಿಕೆಯಾಗಿಲ್ಲ.
ವಾಡಿಕೆಗಿಂತ ಹೆಚ್ಚು ಉಷ್ಣಾಂಶ:
ಕಳೆದ ಮೇ ಇಡೀ ತಿಂಗಳು ಉತ್ತರ ಕರ್ನಾಟಕ ಭಾಗದಲ್ಲಿ ವಾಡಿಕೆಗಿಂತ 2 ರಿಂದ 5 ಡಿಗ್ರಿ ಸೆಲ್ಸಿಯಸ್ ಹೆಚ್ಚಿನ ಉಷ್ಣಾಂಶ ದಾಖಲಾಗಿದೆ. ಕಲಬುರಗಿ, ಬೀದರ್, ರಾಯಚೂರು, ವಿಜಯಪುರ ಜಿಲ್ಲೆಗಳು ಸೇರಿದಂತೆ ಬೇರೆ ಜಿಲ್ಲೆಗಳಲ್ಲಿ ಉಷ್ಣಾಂಶದ ಪ್ರಮಾಣ 40 ಡಿಗ್ರಿ ಸೆಲ್ಸಿಯಸ್ ದಾಟಿದೆ. ಹವಾಮಾನ ಇಲಾಖೆ ಮುಂದಿನ ಎರಡು ದಿನ ವಾಡಿಕೆ ಪ್ರಮಾಣಕ್ಕಿಂತ 5 ಡಿಗ್ರಿ ಸೆಲ್ಸಿಯಸ್ ಹೆಚ್ಚಿನ ಉಷ್ಣಾಂಶವಿರಲಿದೆ ಎಂದು ಹೇಳಿದೆ. ಇದರಿಂದ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬಿಸಿಗಾಳಿಯ ಭೀತಿ ಹೆಚ್ಚಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ನೆರೆ ರಾಜ್ಯಗಳ ಪ್ರಭಾವ:
ಕಳೆದ ಶುಕ್ರವಾರ ಕಲಬುರಗಿಯಲ್ಲಿ ಅತಿ ಹೆಚ್ಚು 44.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ರಾಯಲಸೀಮಾ ಹಾಗೂ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚಿನ ಉಷ್ಣಾಂಶವಿದೆ. ಈ ಭಾಗಕ್ಕೆ ಹೊಂದಿಕೊಂಡಿರುವ ರಾಜ್ಯದ ಜಿಲ್ಲೆಗಳ ಮೇಲೆಯೂ ಅದರ ಪ್ರಭಾವ ಉಂಟಾಗುವುದರಿಂದ ಬೀದರ್, ಬಳ್ಳಾರಿ, ರಾಯಚೂರು, ಕಲಬುರಗಿ, ಯಾದಗಿರಿ, ಬಾಗಲಕೋಟೆ, ಬೆಳಗಾವಿ, ವಿಜಯಪುರ,
ಚಿತ್ರದುರ್ಗ, ದಾವಣಗೆರೆ, ಹಾವೇರಿ, ತುಮಕೂರಿನಲ್ಲಿ ತಾಪಮಾನ ಹೆಚ್ಚಿದೆ ಎಂದು ತಜ್ಞರು ಹೇಳಿದ್ದಾರೆ.
ಕರಾವಳಿ ಜಿಲ್ಲೆಗಳು ತತ್ತರ:
ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲೂ ಉಷ್ಣಾಂಶದಲ್ಲಿ ಏರಿಕೆಯಾಗಿದೆ. ಜತೆಗೆ ಪೂರ್ವ ಮುಂಗಾರು ಕೊರತೆಯೂ ಉಂಟಾಗಿದೆ. ಹೀಗಾಗಿ ಕರಾವಳಿ ಜಿಲ್ಲೆಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿವೆ.