ತುಮಕೂರು ರಸ್ತೆಯ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯುತ್ತಿರುವ 'ಪ್ರವಾಸಿ ಭಾರತೀಯ ದಿವಸ್-2017' ಕಾರ್ಯಕ್ರಮ ಹಿನ್ನೆಲೆ ನಗರಕ್ಕೆ ಪ್ರವೇಶಿಸುವ ಭಾರಿ ಸರಕು ಸಾಗಣೆ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.

ಬೆಂಗಳೂರು(ಜ.07): ತುಮಕೂರು ರಸ್ತೆಯ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯುತ್ತಿರುವ 'ಪ್ರವಾಸಿ ಭಾರತೀಯ ದಿವಸ್-2017' ಕಾರ್ಯಕ್ರಮ ಹಿನ್ನೆಲೆ ನಗರಕ್ಕೆ ಪ್ರವೇಶಿಸುವ ಭಾರಿ ಸರಕು ಸಾಗಣೆ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.

ನಿನ್ನೆ ಬೆಳಗ್ಗೆ 6 ಗಂಟೆಯಿಂದ ಜ. 10ರ ರಾತ್ರಿ 12 ಗಂಟೆ ವರೆಗೆ ಬೆಂಗಳೂರು-ತುಮಕೂರು ರಸ್ತೆ ಗೊರಗುಂಟೆಪಾಳ್ಯದಿಂದ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದವರೆಗೆ ಹಾಗೂ ಯಶವಂತಪುರದಿಂದ ತುಮಕೂರು ಕಡೆಗೆ ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ಗಳು ಹೊರತುಪಡಿಸಿ, ಭಾರಿ ಸರಕು ಸಾಗಾಣಿಕೆ ವಾಹನಗಳ ಸಂಚಾರ ನಿಷೇಧಿಸಲಾಗಿದೆ.

ಹೆಬ್ಬಾಳ ಮಾರ್ಗವಾಗಿ ತುಮಕೂರು ಕಡೆಗೆ ತೆರಳುವ ಸರಕು ಸಾಗಣೆ ವಾಹನಗಳು ರಿಂಗ್‌ರಸ್ತೆಯಲ್ಲಿ ಗೊರಗುಂಟೆಪಾಳ್ಯ ಸಿಗ್ನಲ್‌ನಲ್ಲಿ ಸರ್ವೀಸ್‌ ರಸ್ತೆಗೆ ಬಲತಿರುವು ಪಡೆದು ಸಿಎಂಟಿಐ ಜಂಕ್ಷನ್‌ನಲ್ಲಿ ಎಡತಿರುವು ಪಡೆಯಬೇಕು. ರಿಂಗ್‌ ರಸ್ತೆಯಲ್ಲಿ ಎಫ್‌ಟಿಐ, ಮೇಲ್ಸೇತುವೆ ಮೂಲಕ ಸುಮ್ಮನಹಳ್ಳಿ ಬಳಿ ಬಲತಿರುವು ಪಡೆದು ಮಾಗಡಿ ರಸ್ತೆಗೆ ತಲುಪಿ ನೈಸ್‌ರಸ್ತೆ ಜಂಕ್ಷನ್‌ ಮೂಲಕ ಸೊಂಡೆಕೊಪ್ಪ ಮಾರ್ಗವಾಗಿ ನೆಲಮಂಗಲ ತಲುಪಬಹುದು.

ಯಶವಂತಪುರ ಕಡೆಯಿಂದ ತುಮಕೂರು ಕಡೆಗೆ ತೆರಳುವ ವಾಹನಗಳು ತುಮಕೂರು ಕಡೆಗೆ ಎಡಭಾಗದ ಸರ್ವೀಸ್‌ ರಸ್ತೆಯಲ್ಲಿ ಚಲಿಸಿ ಸಿಎಂಟಿಐ ಜಂಕ್ಷನ್‌ನಲ್ಲಿ ಎಡತಿರುವು ಪಡೆದು ರಿಂಗ್‌ರಸ್ತೆಯಲ್ಲಿ ಎಫ್‌ಟಿಐ, ಮೇಲ್ಸೇತುವೆ ಮೂಲಕ ಸುಮ್ಮನಹಳ್ಳಿ ಬಳಿ ಬಲ ತಿರುವು ಪಡೆದು ಮಾಗಡಿ ರಸ್ತೆಯ ಮೂಲಕ ಸಂಚರಿಸಬಹುದು.

ಮಾಗಡಿ ರಸ್ತೆ ಮತ್ತು ಮೈಸೂರು ರಸ್ತೆ ಮಾರ್ಗವಾಗಿ ರಿಂಗ್‌ರಸ್ತೆಯಲ್ಲಿ ಆರ್‌ಎಂಸಿ ಯಾರ್ಡ್‌ ಕಡೆಗೆ ತೆರಳುವ ವಾಹನಗಳು ರಿಂಗ್‌ ರಸ್ತೆ ಎಫ್‌ಟಿಐ ಸರ್ಕಲ್‌ನಲ್ಲಿ ಬಲತಿರುವು ಪಡೆದು ಕೃಷ್ಣಾನಂದನಗರ ಜಂಕ್ಷನ್‌ನಲ್ಲಿ ಮತ್ತೆ ಎಡತಿರುವು ಪಡೆದು ಎಂಇಐ ಜಂಕ್ಷನ್‌ನಲ್ಲಿ ಬಲತಿರುವು ಪಡೆದು ಸರ್ವೀಸ್‌ ರಸ್ತೆಯಲ್ಲಿ ಆರ್‌ಎಂಸಿ ಯಾರ್ಡ್‌ ತಲುಪಬಹುದು.

ಕೆ.ಆರ್‌. ಪುರ ಕಡೆಯಿಂದ ರಿಂಗ್‌ ರಸ್ತೆಯಲ್ಲಿ ಬಂದು ತುಮಕೂರು ರಸ್ತೆ ತಲುಪುವ ವಾಹನಗಳು ಹೆಬ್ಟಾಳ ಮೇಲ್ಸೇತುವೆ ಕೆಳಭಾಗದಲ್ಲಿ ಬಲತಿರುವು ಪಡೆದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಕೆಂಪಾಪುರ, ಕೊಡಿಗೇಹಳ್ಳಿ, ಬ್ಯಾಟರಾಯನಪುರ ಮಾರ್ಗವಾಗಿ ಬೈಪಾಸ್‌ ಜಂಕ್ಷನ್‌ ಹಾಗೂ ಯಲಹಂಕ ಪೊಲೀಸ್‌ ಠಾಣೆ ಜಂಕ್ಷನ್‌ನಲ್ಲಿ ಬಲತಿರುವು ಪಡೆದು ದೊಡ್ಡಬಳ್ಳಾಪುರ ರಸ್ತೆ ಮಾರ್ಗವಾಗಿ ಸಿಂಗನಾಯಕನಹಳ್ಳಿ ಮೂಲಕ ರಾಜಾನುಕುಂಟೆಯಿಂದ ಎಡತಿರುವು ಪಡೆದು ದೊಡ್ಡಬೆಳವಂಗಲ ಮುಖ್ಯರಸ್ತೆಗೆ ಪ್ರವೇಶಿಸಿ ನೇರವಾಗಿ ದಾಬಸ್‌ಪೇಟೆ ಅಥವಾ ನೆಲಮಂಗಲ ಕಡೆಗೆ ಸಾಗಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರವಾಸಿ ದಿವಸ್‌’ ಅಂದರೆ

ಅನಿವಾಸಿ ಭಾರತೀಯರ ಸಾಧನೆ ಬಿಂಬಿಸುವ ದೇಶದ ಅಪರೂಪದ ಕಾರ್ಯಕ್ರಮ ಇದಾಗಿದ್ದು, ಗಾಂಧೀಜಿ ಭಾರತಕ್ಕೆ ಮರಳಿದ ದಿನವನ್ನು ಪ್ರವಾಸಿ ಭಾರತೀಯ ದಿವಸ್​ ಆಚರಣೆ ಮಾಡಲಾಗುತ್ತಿದೆ. 1915ರ ಜನವರಿ 9ರಂದು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಗಾಂಧೀಜಿ ಮರಳಿದ್ದರು. ಹೀಗಾಗಿ 2003ರಲ್ಲಿ ಪ್ರಧಾನಿ ವಾಜಪೇಯಿ ಈ ದಿನವನ್ನು ಪ್ರವಾಸಿ ಭಾರತೀಯ ದಿವಸ್​ ಆಚರಣೆ ಮಾಡಲು ಆದೇಶ ಹೊರಡಿಸಿದ್ದರು. 14ನೇ ಪ್ರವಾಸಿ ಭಾರತ್​ ದಿವಸ್ ಆಗಿರುವ ಇದು ಬೆಂಗಳೂರಿನಲ್ಲಿ ನಡೆಯುತ್ತಿದೆ. ​

'ಪ್ರವಾಸಿ ದಿವಸ್‌’ ವಿಶೇಷತೆ

ಅಮೆರಿಕ, ಇಂಗ್ಲೆಂಡ್, ರಷ್ಯಾ ಸೇರಿ 70 ದೇಶ ಹಾಗೂ 14 ರಾಜ್ಯಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.

ಮೊದಲ ದಿನ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ 240 ಕಲಾವಿದರು ಭಾಗವಹಿಸಲಿದ್ದಾರೆ.

ಪ್ರಾಚೀನ ಮತ್ತು ಆಧುನಿಕ ಕರ್ನಾಟಕ ಬಿಂಬಿಸುವ ಮಾದರಿ ಪ್ರದರ್ಶನ ಇರಲಿದೆ

ಹಂಪಿ ವಿಜಯ ವಿಠಲ ದೇವಸ್ಥಾನದಲ್ಲಿರುವ ಶಿಲ್ಪಗಳು, ಸಂಗೀತ ನುಡಿಸುವ ಶಿಲಾ ಪ್ರತಿರೂಪ

ವಸ್ತು ಪ್ರದರ್ಶನದ ಹಾಲ್‌ ಸಮೀಪದಲ್ಲಿ 12 ಅಡಿಗಳ ಪ್ರಾಚೀನ ಶಿಲಾ ಮಂಟ ಇದೆ

ಒಟ್ಟು 18 ರಾಜ್ಯಗಳು ಈ ‘ಪ್ರವಾಸಿ ಭಾರತೀಯ ದಿವಸ್‌’ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದು, ಪ್ರತಿಯೊಂದು ರಾಜ್ಯವೂ ಅಲ್ಲಿನ ನೆಲದ ಸೊಗಡಿಗೆ ತಕ್ಕಂತೆ ಮಳಿಗೆಗಳನ್ನು ವಿನ್ಯಾಸಗೊಳಿಸಿವೆ. ಪ್ರವಾಸಿ ಭಾರತೀಯ ದಿವಸ್‌ನಲ್ಲಿ ಭಾಗವಹಿಸಲು 6346 ಮಂದಿ ಹೆಸರು ನೋಂದಾಯಿಸಿದ್ದಾರೆ. ಈ ಪ್ರವಾಸಿ ಭಾರತ್​​ ದಿವಸ್​​ ಕಾರ್ಯಕ್ರಮದಲ್ಲಿ 70 ದೇಶಗಳ ಪ್ರತಿನಿಧಿಗಳು ಆಗಮಿಸುತ್ತಿದ್ದು, ಭಾರತದ ಸುಮಾರು 25 ದಶಲಕ್ಷ ಜನರು ವಿದೇಶಗಳಲ್ಲಿ ನೆಲೆಸಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ನಾಳೆ ಪ್ರಧಾನಿ ಮೋದಿ ಪ್ರವಾಸಿ ಭಾರತೀಯ ದಿವಸದ ಬಗ್ಗೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಪೋರ್ಚುಗಲ್ ಪ್ರಧಾನಿ ಅಂಟೊನಿಯೋ ಕೋಸ್ಟಾ ಅತಿಥಿಯಾಗಿ ಆಗಮಿಸಲಿದ್ದಾರೆ. ಅನಿವಾಸಿ ಭಾರತೀಯರ ಜತೆ ಚರ್ಚೆ ಹಾಗೂ ಮುಖ್ಯಮಂತ್ರಿಗಳ ಸಮ್ಮೇಳನ ನಡೆಯಲಿದೆ. 3 ದಿನಗಳ ಕಾರ್ಯಕ್ರಮದಲ್ಲಿ ಒಟ್ಟಾರೆ 10 ವಿಚಾರಗೋಷ್ಠಿಗಳು ನಡೆಯಲಿದ್ದು, ಸೋಮವಾರ ಸಂಜೆ 5 ಗಂಟೆಗೆ ರಾಷ್ಟ್ರಪತಿಗಳು ಪ್ರವಾಸಿ ಭಾರತೀಯ ದಿವಸಕ್ಕೆ ತೆರೆ ಎಳೆಯಲಿದ್ದಾರೆ.