ಬಿಜೆಪಿ ಬೆಂಬಲಿಸದಂತೆ ಜನರಿಗೆ ಕರೆ ಕೊಟ್ಟ ಪ್ರಕಾಶ್ ರೈ
ವಿಜಯಪುರ ಪತ್ರಿಕಾಗೋಷ್ಠಿಯಲ್ಲಿ ಚಿತ್ರ ನಟ ಪ್ರಕಾಶ ರೈ ಈ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸದಂತೆ ಜನರಿಗೆ ಕರೆ ಕೊಟ್ಟಿದ್ದಾರೆ.
ವಿಜಯಪುರ : ವಿಜಯಪುರ ಪತ್ರಿಕಾಗೋಷ್ಠಿಯಲ್ಲಿ ಚಿತ್ರ ನಟ ಪ್ರಕಾಶ ರೈ ಈ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸದಂತೆ ಜನರಿಗೆ ಕರೆ ಕೊಟ್ಟಿದ್ದಾರೆ. ನಾನು ಕಾಂಗ್ರೆಸ್ ಏಜೆಂಟ್ ಅಲ್ಲ. ಆದರೂ ಕೋಮುವಾದ ಹಿನ್ನೆಲೆಯಲ್ಲಿ ಬಿಜೆಪಿಯನ್ನು ನೀವು ಬೆಂಬಲಿಸಬೇಡಿ ಎಂದು ಜನರಿಗೆ ಹೇಳುತ್ತೇನೆ. ಪ್ರತಿಪಕ್ಷಗಳನ್ನು ಪ್ರಾಣಿಗಳಿಗೆ ಹೋಲಿಸಿದ ಅಮಿತ್ ಶಾ ಪುಂಗಿ ಊದಲು ಕರ್ನಾಟಕ್ಕೆ ಬರುತ್ತಿದ್ದಾರಾ ಎಂದು ಅವರು ಈ ವೇಳೆ ಪ್ರಶ್ನೆ ಮಾಡಿದ್ದಾರೆ.
ಅಲ್ಲದೇ ಉತ್ತರ ಭಾರತದಲ್ಲಿ ಯುವ ಜನತೆ, ರೈತರು ದಂಗೆ ಎದ್ದಿದ್ದಾರೆ. ಆಂಧ್ರ, ತೆಲಂಗಾಣ, ತಮಿಳುನಾಡು, ಕೇರಳದಲ್ಲಿ ಬಿಜೆಪಿ ಆಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ. ಕರ್ನಾಟಕದಲ್ಲಿಯೂ ಕೂಡ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ದಕ್ಷಿಣ ಭಾರತದಿಂದಲೇ ಬಿಜೆಪಿ ಕೌಂಟ್ ಡೌನ್ ಶುರುವಾಗುತ್ತದೆ ಎಂದು ಪ್ರಕಾಶ್ ರೈ ಈ ವೇಳೆ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ಕಾವೇರಿ ವಿವಾದ ಭಾವನಾತ್ಮಾಕವಾದ ವಿಚಾರ ಅಲ್ಲ. ತಜ್ಞರ ಜೊತೆ ಚರ್ಚಿಸಿ ಬಗೆಹರಿಸಬೇಕು. ಕಾವೇರಿ ವಿಷಯಕ್ಕೆ ಸಿನಿಮಾ ನಿಷೇಧ ಮಾಡುವುದೂ ಕೂಡ ಸರಿಯಲ್ಲ ಎಂದು ರೈ ಈ ವೇಳೆ ಅಭಿಪ್ರಾಯ ವ್ಯಕ್ತಪಡಿಸಿದರು.
ಇನ್ನು ನನ್ನನ್ನು ಹಿಂದು ವಿರೋಧಿ ಎಂದು ಯಾಕೆ ಪಟ್ಟ ಕಟ್ಟಬೇಕು. ನಾನೇನಿದ್ದರೂ ಅಮಿತ್ ಶಾ, ಮೋದಿ, ಅನಂತಕುಮಾರ ಹೆಗಡೆ, ಪ್ರತಾಪ ಸಿಂಹ ವಿರೋಧಿಯಷ್ಟೇ. ಮುಕ್ತ ಚರ್ಚೆಗೆ ನಾನು ಸಿದ್ಧವಾಗಿದ್ದೇನೆ. ಬೇಕಿದ್ದರೆ ಅನಂತ ಕುಮಾರ್ ಹೆಗಡೆ ಬರಲಿ ಎಂದು ಈ ವೇಳೆ ಪ್ರಕಾಶ್ ರೈ ಪಂಥಾಹ್ವನ ನೀಡಿದರು.