ಉತ್ತರ ಕರ್ನಾಟಕಕ್ಕೆ ಕುಮಾರಸ್ವಾಮಿ ಮತ್ತು ದೇವೇಗೌಡರಿಂದ ಅನ್ಯಾಯ
- ಸೀಟು ಬಂದಿಲ್ಲ ಎಂದು ಜೆಡಿಎಸ್ ನಾಯಕರಿಂದ ಅನ್ಯಾಯ
- ಒಂದು ಕೈಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಂಡಿರುವ ಹೆಚ್ಡಿಕೆ
ಹುಬ್ಬಳ್ಳಿ[ಜು.07]: ಕುಮಾರಸ್ವಾಮಿ ಮತ್ತು ದೇವೇಗೌಡರು ಉತ್ತರ ಕರ್ನಾಟಕಕ್ಕೆ ಮೊದಲಿನಿಂದಲೂ ಅನ್ಯಾಯ ಮಾಡುತ್ತಾ ಬಂದಿದ್ದಾರೆ ಎಂದು ಸಂಸದ ಪ್ರಹ್ಲಾದ್ ಜೋಶಿ ಜೆಡಿಎಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ದೇವೇಗೌಡರು ಪ್ರಧಾನಿಯಾಗಿದ್ದಾಗಲೂ ಇದೇ ರೀತಿ ಅನ್ಯಾಯ ಮಾಡಿದ್ದರು. ಈಗ ಮೂರ್ನಾಲ್ಕು ಜಿಲ್ಲೆಗಳಿಗೆ ಮಾತ್ರ ಅನುದಾನ ನೀಡಿದ್ದಾರೆ.ಜೆಡಿಎಸ್ಗೆ ಈ ಭಾಗದಲ್ಲಿ ಸೀಟು ಬಂದಿಲ್ಲ ಎಂದು ಅನ್ಯಾಯ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕುಮಾರಸ್ವಾಮಿಯವರು ಜನರ ಕಣ್ಣಿಗೆ ಮಣ್ಣೆರಚಿದ್ದಾರೆ. ಒಂದು ಕೈಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಂಡಿದ್ದಾರೆ. ರಾಹುಲ್ ಗಾಂಧಿಯವರೇ ನಿಮ್ಮ ಸರ್ಕಾರ ಮಾಡಿದ ಸಾಲ ನಾವು ತೀರಿಸಿದ್ದೇವೆ. ಆದರೂ ನೀವು ಮೋದಿ ಸರ್ಕಾರಕ್ಕೆ ಚಾಲೆಂಜ್ ಮಾಡಿದ್ದೀರಿ. ಈಗ ನಿಮ್ಮ ಸಹಭಾಗಿತ್ವದ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿದೆ ಎಂದರು.
ರಾಜ್ಯದ ಆರ್ಥಿಕ ವ್ಯವಸ್ಥೆ ಹದಗೆಡಿಸಲಾಗುತ್ತಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ನವರು ರಾಜ್ಯವನ್ನು ಸಾಲಗಾರ ರಾಜ್ಯವಾಗಿ ಮಾಡುತ್ತಿದೆ. ಕೇಂದ್ರದ ಅನುದಾನ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.