ಬಡವರು ಕೂಡಾ ಶುಚಿಯಾಗಿರಬೇಕು : ಗೋವಾ ಸಿಎಂ ಪರ್ರಿಕರ್
- ಗೋವಾದಲ್ಲಿ ಪ್ರತಿನಿತ್ಯ 25 ಪತ್ರಿಕಾಗೋಷ್ಠಿ ನಡೆಯುತ್ತಿವೆ
- ರಾಜ್ಯದಲ್ಲಿ ಟೀಕಿಸುವ ಪ್ರವೃತ್ತಿ ಹೆಚ್ಚಾಗಿದೆ
ಪಣಜಿ: ಬಡವರು ಕೂಡಾ ಶುಚಿತ್ವ ಕಾಪಾಡಬೇಕು, ಅದಕ್ಕೆ ಹೆಚ್ಚು ಹಣ ಖರ್ಚಾಗುವುದಿಲ್ಲವೆಂದು ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಹೇಳಿದ್ದಾರೆ.
ನಾವು ಶುಚಿಯಾಗಿರಬೇಕು, ಬಡವರು ಕೂಡಾ ಶುಚಿಯಾಗಿರಬೇಕು. ಅದಕ್ಕೆ ಹೆಚ್ಚೇನೂ ಹಣದ ಅಗತ್ಯವಿಲ್ಲ. ಸರಳವಾಗಿರುವ ವಿಷಯಗಳನ್ನು ಸುಲಭವಾಗಿ ಮಾಡಬಹುದು, ಎಂದು ಆರೋಗ್ಯ ಇಲಾಖೆಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಪರ್ರಿಕರ್ ಹೇಳಿದ್ದಾರೆ.
ರಾಜ್ಯದಲ್ಲಿ ಟೀಕಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಪರ್ರಿಕರ್, ಗೋವಾದಲ್ಲಿ ಪ್ರತಿನಿತ್ಯ 25 ಪತ್ರಿಕಾಗೋಷ್ಠಿ ನಡೆಯುತ್ತಿವೆಯೆಂದು ಪೊಲೀಸ್ ವರದಿ ತಿಳಿಸುತ್ತದೆ. ಕೆಲವರಿಗೆ ಬರೇ ಟೀಕಿಸುವ ಚಾಳಿ. ಯಾರು, ಏನಕ್ಕೆ ಈ ಪತ್ರಿಕಾಗೋಷ್ಠಿಗಳನ್ನು ನಡೆಸುತ್ತಾರೆ ಎಂದು ಯಾರಿಗೂ ತಿಳಿದಿಲ್ಲ, ಎಂದು ಪರ್ರಿಕರ್ ಹೇಳಿದ್ದಾರೆ.
ಇತ್ತೀಚೆಗೆ, ಹುಡುಗಿಯರು ಕೂಡಾ ಬಿಯರ್ ಕುಡಿಯಲಾರಂಭಿಸಿರುವುದು ನೋಡಿ ಗಾಬರಿಯಾಗುತ್ತಿದೆ ಎಂದು ಹೇಳುವ ಮೂಲಕ ಪರ್ರಿಕರ್, ಭಾರೀ ಟೀಕೆಗೊಳಗಾಗಿದ್ದರು.