ಗಂಗೆಗಿಂತಲೂ ಮಲಿನವಾಗಿದ್ದಾಳೆ ಕಾವೇರಿ..!
ದೇಶದ ಪ್ರಮುಖ ನದಿಗಳಿಗೆ ಹೋಲಿಸಿದರೆ ಸಮುದ್ರಕ್ಕೆ ಸೇರುವ ನೀರಿನ ಪ್ರಮಾಣ ಕಡಿಮೆ, ಆದರೆ ನದಿ ಒಡಲಲ್ಲಿ ಅಪಾಯಕಾರಿ ರಾಸಾಯನಿಕಗಳ ಕಲ್ಮಷ ಮಾತ್ರ ಭಯಂಕರ. ಇದು ಕಾವೇರಿ ನದಿಯ ಸ್ಥಿತಿ.
ಚೆನ್ನೈ(ಡಿ.24): ದೇಶದ ಪ್ರಮುಖ ನದಿಗಳಿಗೆ ಹೋಲಿಸಿದರೆ ಸಮುದ್ರಕ್ಕೆ ಸೇರುವ ನೀರಿನ ಪ್ರಮಾಣ ಕಡಿಮೆ, ಆದರೆ ನದಿ ಒಡಲಲ್ಲಿ ಅಪಾಯಕಾರಿ ರಾಸಾಯನಿಕಗಳ ಕಲ್ಮಷ ಮಾತ್ರ ಭಯಂಕರ. ಇದು ಕಾವೇರಿ ನದಿಯ ಸ್ಥಿತಿಯಾಗಿದೆ.
ತಮಿಳುನಾಡಿನ ಅಣ್ಣಾ ವಿಶ್ವವಿದ್ಯಾಲಯವು ನಡೆಸಿದ ಸರಕಾರಿ ಪ್ರಾಯೋಜಿತ ಅಧ್ಯಯನದಲ್ಲಿ ಈ ಕಳವಳಕಾರಿ ಸಂಗತಿ ತಿಳಿದುಬಂದಿದೆ. ಕಾವೇರಿಯಿಂದ ಪ್ರತಿ ವರ್ಷ 8.3 ಕ್ಯೂಬಿಕ್ ಕಿಲೋಮೀಟರ್ ನದಿ ನೀರು ಸಾಗರ ಸೇರುತ್ತಿದೆ.
ಇದರ ಪ್ರತಿ ಲೀಟರ್ ನೀರಿನಲ್ಲಿ ಒಟ್ಟು ಕರಗುವ ಘನವಸ್ತುಗಳ ಮಟ್ಟ 753 ಮಿಲಿಗ್ರಾಂ ತಲುಪಿದೆ. ಇದು ಗಂಗಾ ನದಿಯ ಟಿಡಿಎಸ್ ಪ್ರಮಾಣಕ್ಕಿಂತ ಐದು ಪಟ್ಟು ಹೆಚ್ಚು ಎಂದು ಡಿಸೆಂಬರ್ 9ರಂದು ಬಿಡುಗಡೆಗೊಂಡ ಅಂತಿಮ ವರದಿಯಲ್ಲಿ ತಿಳಿಸಲಾಗಿದೆ.
ಪವಿತ್ರ ಕಾವೇರಿಯ ಒಡಲು ಕಲ್ಮಷಗೊಳ್ಳಲು ತಮಿಳುನಾಡು ಮತ್ತು ಕರ್ನಾಟಕ ಎರಡೂ ರಾಜ್ಯಗಳ ಪಾಪದ ಪಾಲಿದೆ. ಮೇಕೆದಾಟು, ಶ್ರೀರಂಗಪಟ್ಟಣ, ಕಂಡಿಯೂರು, ಅಪ್ಪಕುದಥನ್, ಪನ್ನವಾಡಿ ಮತ್ತು ರುದ್ರಪಟ್ಟಣ ಸೇರಿದಂತೆ ಇನ್ನು ಹಲವು ಕಡೆಯ ಅಂತರ್ಜಲ ರಾಸಾಯನಿಕಗಳಿಂದ ಹದಗೆಟ್ಟಿದ್ದು ಅದು ನದಿಯ ಒಡಲು ವಿಷಯುಕ್ತಗೊಳ್ಳಲು ಕಾರಣ. ಇದರಿಂದ ಕಾವೇರಿ ನೀರು ನೀರಾವರಿ ಹಾಗೂ ಕುಡಿಯಲು ಅನರ್ಹಗೊಳ್ಳುತ್ತಿದೆ ಎಂದು ಎಚ್ಚರಿಸಿದೆ.