ಸಿದ್ದರಾಮಯ್ಯ ಹಾಗೂ ಜಿಡಿ ದೇವೇಗೌಡ ನಡುವೆ ರಾಜಕೀಯವಾಗಿ ಸಣ್ಣ ಪ್ರಮಾಣದಲ್ಲಿ ವಾರ್ ಮುಂದುವರಿದಿದೆ. ಇದೀಗ ಪರೋಕ್ಷವಾಗಿ ಮತ್ತೊಮ್ಮೆ ಜಿಟಿ ದೇವೇಗೌಡ ಅವರು ಸಿದ್ದರಾಮಯ್ಯ ವಿರುದ್ಧ ಟಾಂಗ್ ನೀಡಿದ್ದಾರೆ. 

ಬೆಂಗಳೂರು: ಕಳೆದ ಸರ್ಕಾರದ ಅವಧಿಯಲ್ಲಿ ಅರ್ಹರಲ್ಲದ ವ್ಯಕ್ತಿಗಳನ್ನು ಸಹ ಸಿಂಡಿಕೇಟ್ ಸದಸ್ಯರಾಗಿ ನೇಮಕ ಮಾಡಲಾಗಿತ್ತು ಎಂದು ಹೇಳುವ ಮೂಲಕ ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಮತ್ತೊಮ್ಮೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ದೇವೇಗೌಡರು, ಯಾವುದೇ ಹೊಸ ಸರ್ಕಾರ ಬಂದರೂ ಹಿಂದಿನ ಸರ್ಕಾರದ ನೇಮಕವನ್ನು ರದ್ದು ಮಾಡುತ್ತದೆ. ಬಿಜೆಪಿ ಅವಧಿಯ ಸದಸ್ಯರು ನೇಮಕವಾಗಿದ್ದ ಕೆಲವೇ ತಿಂಗಳಲ್ಲೇ ಸಿದ್ದರಾಮಯ್ಯ ಅವರು ಅಧಿಕಾರ ವಹಿಸಿಕೊಂಡು ಬಿಜೆಪಿ ಅವಧಿಯ ನೇಮಕ ರದ್ದು ಮಾಡಿದ್ದರು. 

ಹೀಗಾಗಿ ಸಮ್ಮಿಶ್ರ ಸರ್ಕಾರದಲ್ಲೂ ಅದನ್ನು ಮಾಡಿದ್ದೇವೆ. ಸಿಂಡಿಕೇಟ್ ಹಾಗೂ ಸೆನೆಟ್ ಸದಸ್ಯರ ಹುದ್ದೆಗೆ ಅರ್ಹರನ್ನು ನೇಮಕ ಮಾಡಬೇಕು ಎಂಬುದು ನಮ್ಮ ಉದ್ದೇಶ ಎಂದು ಹೇಳಿದರು. ಈ ಮೂಲಕ ಸಿದ್ದರಾಮಯ್ಯ ಅವರ ವಿರೋಧದ ನಡುವೆಯೂ ಸಿಂಡಿಕೇಟ್ ಸದಸ್ಯರ ನೇಮಕ ರದ್ದುಗೊಳಿಸಿದ್ದ ತಮ್ಮ ನಿರ್ಧಾರವನ್ನು ಸಚಿವರು ಮತ್ತೊಮ್ಮೆ ಸಮರ್ಥಿಸಿಕೊಂಡಂತಾಗಿದೆ. 

ಹಾಗಾದರೆ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಅನರ್ಹರು ನೇಮಕವಾಗಿದ್ದರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಕೆಲವು ಅನರ್ಹರನ್ನು ಸಹ ನೇಮಕ ಮಾಡಲಾಗಿತ್ತು ಎಂದು ಹೇಳಿದರು.