RSS ಕಾರ್ಯಕರ್ತ ಶರತ್ ಶವಯಾತ್ರೆ ವೇಳೆ ಕಲ್ಲು ತೂರಾಟದಿಂದ ಉದ್ವಿಗ್ನಗೊಂಡಿದ್ದ ಬಂಟ್ವಾಳ ತಾಲೂಕಿನ ಬಿ.ಸಿ. ರೋಡ್ ಬಹುತೇಕ ಶಾಂತ ಸ್ಥಿತಿಗೆ ಮರಳಿದೆ. ಪ್ರಕರಣದ ನಂತರ ಇಡೀ ಬಂಟ್ವಾಳ ತಾಲೂಕಿನಲ್ಲಿ ಬಿಗಿ ಪೊಲೀಸ್​ ಬಂದೋಬಸ್ತ್ ಮಾಡಲಾಗಿತ್ತು. ಬಿ.ಸಿ. ರೋಡ್'ನಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.

ಮಂಗಳೂರು(ಜು.10): RSS ಕಾರ್ಯಕರ್ತ ಶರತ್ ಶವಯಾತ್ರೆ ವೇಳೆ ಕಲ್ಲು ತೂರಾಟದಿಂದ ಉದ್ವಿಗ್ನಗೊಂಡಿದ್ದ ಬಂಟ್ವಾಳ ತಾಲೂಕಿನ ಬಿ.ಸಿ. ರೋಡ್ ಬಹುತೇಕ ಶಾಂತ ಸ್ಥಿತಿಗೆ ಮರಳಿದೆ. ಪ್ರಕರಣದ ನಂತರ ಇಡೀ ಬಂಟ್ವಾಳ ತಾಲೂಕಿನಲ್ಲಿ ಬಿಗಿ ಪೊಲೀಸ್​ ಬಂದೋಬಸ್ತ್ ಮಾಡಲಾಗಿತ್ತು. ಬಿ.ಸಿ. ರೋಡ್'ನಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.

ಗಲಭೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 13 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ. ಶವಯಾತ್ರೆ ವೇಳೆ ಕಲ್ಲು ತೂರಾಟ ನಡೆಸಿದ ದೃಶ್ಯಾವಳಿಗಳೂ ಲಭ್ಯವಾಗಿದ್ದು, ಅವುಗಳನ್ನು ಆಧರಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇನ್ನು ಸಾಮಾಜಿಕ ಜಾಲತಾಣದಲ್ಲಿ ವದಂತಿ ಹಬ್ಬಿಸುವವರ ವಿರುದ್ದ ಕ್ರಮ ತೆಗೆದುಕೊಳ್ಳಲು ಪೊಲೀಸ್ ಇಲಾಖೆ ನಿರ್ಧರಿಸಿದೆ. ಗುಂಪು ಸೇರಿ ಗಲಾಟೆ ಎಬ್ಬಿಸುವವರ ವಿರುದ್ದ ಲಾಠಿ ಚಾರ್ಜ್ ನಡೆಸಲು, ಆಶ್ರುವಾಯು ಸಿಡಿಸಲು ಕೂಡಾ ಪೊಲೀಸರಿಗೆ ನಿರ್ದೇಶನ ನೀಡಲಾಗಿದೆ.

ಒಟ್ಟಾರೆ ಪ್ರಕ್ಷುಬ್ದಗೊಂಡಿದ್ದ ದಕ್ಷಿಣ ಕನ್ನಡ ಸಹಜಸ್ಥಿತಿಗೆ ಮರಳಿದೆ. ಆದರೂ ಆಂತರಿಕವಾಗಿ ಗಾಢ ಮೌನ ಆವರಿಸಿದ್ದು, ಜನರಲ್ಲಿ ಮನೆ ಮಾಡಿರುವ ಆತಂಕ ಇನ್ನೂ ದೂರವಾಗಿಲ್ಲ.