ಸಿಎಂ ಮಮತಾ ವಿರುದ್ಧ ಎಫ್‌ಐಆರ್‌! ಸಿವಿಲ್ ವಾರ್ ಹೇಳಿಕೆ ನೀಡಿದ್ದ ಮಮತಾ! ದಿಬ್ರುಗರ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌

ನವದೆಹಲಿ(ಆ.1): ರಾಷ್ಟ್ರೀಯ ನಾಗರಿಕ ನೋಂದಣಿ ಪಟ್ಟಿ ಜಾರಿಯಾದರೆ ನಾಗರಿಕ ಯುದ್ಧ ನಡೆಯುತ್ತದೆ ಎಂದು ಹೇಳಿಕೆ ನೀಡಿದ್ದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಿವಿಲ್‌ ವಾರ್‌ ಹೇಳಿಕೆ ನೀಡಿದ್ದ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ದಿಬ್ರುಗರ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಎಫ್‌ಐಆರ್‌ನಲ್ಲಿ ‘ಮಮತಾ ಅವರು ಶಾಂತಿಯನ್ನು ಕದಡಲು ಪ್ರಯತ್ನಿಸುತ್ತಿದ್ದಾರೆ’ ಎಂದು ಉಲ್ಲೇಖಿಸಲಾಗಿದ್ದು, ಘಟನೆಯ ಪುರಾವೆಯಾಗಿ ದೂರುದಾರ ಮಮತಾ ಬ್ಯಾನರ್ಜಿಯವರ ವಿಡಿಯೋವನ್ನು ನೀಡಿದ್ದಾರೆ.

ನಿನ್ನೆಯಷ್ಟೇ ಅಸ್ಸಾಂ ರಾಷ್ಟ್ರೀಯ ನಾಗರಿಕ ನೋಂದಣಿ (ಎನ್​ಆರ್​ಸಿ) ಕರಡು ಪಟ್ಟಿಯು ಜನರನ್ನು ಒಡೆಯುವ ತಂತ್ರವಾಗಿದೆ. ಅಲ್ಲದೆ, ದೇಶದಲ್ಲಿ ರಕ್ತಪಾತ ಮತ್ತು ನಾಗರಿಕ ಯುದ್ಧಕ್ಕೆ ನೇರ ಕಾರಣವಾಗಲಿದೆ ಎಂದು ಮಮತಾ ಬ್ಯಾನರ್ಜಿ ದೂರಿದ್ದರು.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ದೂರಿದ್ದ ಮಮತಾ, ರಾಜಕೀಯ ಲಾಭಕ್ಕಾಗಿ ಅಸ್ಸಾಂನಲ್ಲಿ ಲಕ್ಷಾಂತರ ಜನರನ್ನು ಅತಂತ್ರ ಸ್ಥಿತಿಗೆ ತಳ್ಳಲಾಗಿದೆ ಎಂದು ಆರೋಪಿಸಿದ್ದರು.