ಮಾವೋವಾದಿಗಳು ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಲಾದ ಭದ್ರತೆಯನ್ನು ಹೆಚ್ಚಿಸಲು ತೀರ್ಮಾನಿಸಲಾಗಿದೆ.

ನವದೆಹಲಿ :  ಮಾವೋವಾದಿಗಳು ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಲಾದ ಭದ್ರತೆಯನ್ನು ಹೆಚ್ಚಿಸಲು ತೀರ್ಮಾನಿಸಲಾಗಿದೆ.

ನಕ್ಸಲೀಯರ ಬೆದರಿಕೆ ವರದಿಗಳ ಕಾರಣ ಸೋಮವಾರ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್‌ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು. ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌, ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್‌ ಗೌಬ, ಗುಪ್ತಚರ ದಳದ ನಿರ್ದೇಶಕ ರಾಜೀವ್‌ ಜೈನ್‌ ಅವರೂ ಇದ್ದರು.

ಸಭೆಯಲ್ಲಿ ರಾಜನಾಥ ಸಿಂಗ್‌ ಅವರು ಪ್ರಧಾನಿಯವರಿಗೆ ನೀಡಿರುವ ಭದ್ರತೆಯನ್ನು ಹೆಚ್ಚಿಸಬೇಕು ಎಂದು ಸೂಚಿಸಿದರು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಮೋದಿ ಅವರಿಗೆ ಈಗ ಎಸ್‌ಪಿಜಿ ಭದ್ರತೆ ಇದೆ.

ರಾಜೀವ ಗಾಂಧಿ ಅವರ ಶೈಲುಯಲ್ಲಿ ಮೋದಿ ಅವರನ್ನು ಹತ್ಯೆ ಮಾಡಬೇಕು ಎಂಬ ಪತ್ರವನ್ನು ದಿಲ್ಲಿಯ ಮನೆಯೊಂದರಲ್ಲಿ ಇತ್ತೀಚೆಗೆ ವಶಪಡಿಸಿಕೊಳ್ಳಲಾಗಿತ್ತು. ಮಹಾರಾಷ್ಟ್ರದ ಭೀಮಾ ಕೋರೆಗಾಂವ್‌ ಗಕಭೆಗೆ ಸಂಬಂಧಿಸಿದಂತೆ ಮಾವೋವಾದಿಗಳ ಜತೆ ನಂಟು ಹೊಂದಿದ್ದಾರೆ ಎನ್ನಲಾದ ಕೆಲವರ ನಿವಾಸಗಳ ಮೇಲೆ ದಾಳಿ ನಡೆದಾಗ ಈ ಪತ್ರವು ಸಿಕ್ಕಿತ್ತು ಎಂದು ಪುಣೆ ಪೊಲೀಸರು ಜೂನ್‌ 7ರಂದು ಕೋರ್ಟ್‌ಗೆ ತಿಳಿಸಿದ್ದರು.