ಈ ಬಾರೀ ಆಗಸ್ಟ್ 15ಕ್ಕೆ ಪ್ರಧಾನಿ ನರೇಂದ್ರ ಮೋದಿ ಜಮ್ಮು ಕಾಶ್ಮೀರಕ್ಕೆ ತೆರಳಿ ಅಲ್ಲಿ ಧ್ವಜಾರೋಹಣ ಮಾಡಲಿದ್ದಾರೆ ಎನ್ನಲಾಗಿದೆ. 

ನವದೆಹಲಿ [ಆ.03]: ಜಮ್ಮು-ಕಾಶ್ಮೀರದಲ್ಲಿ ಕೇಂದ್ರ ಸರ್ಕಾರ ಬರೋಬ್ಬರಿ 38 ಸಾವಿರ ಯೋಧರನ್ನು ನಿಯೋಜನೆ ಮಾಡಿರುವುದು ಕುತೂಹಲದ ಚರ್ಚೆಗೆ ಕಾರಣವಾಗಿದೆ. ಸಂವಿಧಾನದ 35ಎ ಹಾಗೂ 370ನೇ ವಿಧಿಯನ್ನು ರದ್ದುಗೊಳಿಸುವ ಸಲುವಾಗಿ ಬಿಗಿ ಬಂದೋಬಸ್ತ್ ಮಾಡುತ್ತಿರಬಹುದು ಎಂಬ ವಾದಗಳು ಹಲವು ದಿನಗಳಿಂದ ವ್ಯಾಪಕವಾಗಿ ಕೇಳಿಬರುತ್ತಿವೆ. 

Add Asianetnews Kannada as a Preferred SourcegooglePreferred

ಇದರ ನಡುವೆಯೇ, ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯಂದು ದೆಹಲಿಯ ಬದಲಾಗಿ ಕಾಶ್ಮೀರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಧ್ವಜಾರೋಹಣ ಮಾಡಬಹುದು. ಅದಕ್ಕಾಗಿ ಭಾರಿ ಭದ್ರತೆ ಕೈಗೊಳ್ಳುತ್ತಿರಬಹುದು ಎಂಬ ಹೊಸ ತರ್ಕವೊಂದು ಕೇಳಿಬಂದಿದೆ.

ಅಪನಗದೀಕರಣ, ಬಜೆಟ್‌ ದಿನಾಂಕ ಹಿಂದೂಡಿಕೆ, ರೈಲ್ವೆ ಬಜೆಟ್‌ ವಿಲೀನದಂತಹ ಅನಿರೀಕ್ಷಿತ ನಿರ್ಧಾರಗಳಿಂದ ದೇಶದ ಗಮನವನ್ನು ಮೋದಿ ಸೆಳೆದಿರುವ ಹಿನ್ನೆಲೆಯಲ್ಲಿ ಈ ತರ್ಕಕ್ಕೆ ಹೆಚ್ಚಿನ ಪುಷ್ಟಿಸಿಗುತ್ತಿದೆ.

ಸಾಮಾನ್ಯವಾಗಿ ಪ್ರಧಾನಮಂತ್ರಿಗಳು ದೆಹಲಿಯ ಐತಿಹಾಸಿಕ ಕೆಂಪುಕೋಟೆಯ ಮೇಲೆ ಧ್ವಜಾರೋಹಣ ಮಾಡಿ, ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡುತ್ತಾರೆ. ಆದರೆ ಈ ಬಾರಿ ಕಾಶ್ಮೀರದಲ್ಲಿ ಧ್ವಜಾರೋಹಣ ಮಾಡುವ ಮೂಲಕ ಪಾಕಿಸ್ತಾನಕ್ಕೆ ತೀಕ್ಷ$್ಣ ಸಂದೇಶ ನೀಡಲು ಯತ್ನಿಸುತ್ತಿರಬಹುದು. ಅದಕ್ಕೆ ಪೂರ್ವಭಾವಿಯಾಗಿ ಭಾರಿ ಪ್ರಮಾಣದ ಭದ್ರತೆಯನ್ನು ಆ ರಾಜ್ಯದಲ್ಲಿ ಕೈಗೊಳ್ಳುತ್ತಿರಬಹುದು ಎಂದು ಕೆಲ ವಿಶ್ಲೇಷಣೆಗಳು ತಿಳಿಸಿವೆ.

ಇದಲ್ಲದೆ, ಕಾಶ್ಮೀರದಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ಮುನ್ನ ನಡೆಯಬಹುದಾದ ಉಗ್ರರ ದಾಳಿಯನ್ನು ಹತ್ತಿಕ್ಕಲು, ವಿಧಾನಸಭೆ ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲು, ಕಾಶ್ಮೀರದಲ್ಲಿರುವ ಸೈನಿಕರಿಗೆ ನೈತಿಕ ಸ್ಥೈರ್ಯ ತುಂಬಲು ಹಾಗೂ ಕೆಲ ಕಾಶ್ಮೀರಿಗಳ ಬಹುದಿನದ ಬೇಡಿಕೆಯಾಗಿರುವ ಪಶ್ಚಿಮ ಪಾಕಿಸ್ತಾನದ ನಿರಾಶ್ರಿತರಿಗೆ ಮತದಾನ ಹಕ್ಕು ನೀಡುವ ಉದ್ದೇಶದಿಂದಲೂ ಯೋಧರನ್ನು ಜಮಾವಣೆ ಮಾಡುತ್ತಿರಬಹುದು ಎಂಬ ವಾದಗಳೂ ಕೇಳಿಬಂದಿವೆ.

ಆದರೆ ಏಕಾಏಕಿ 38 ಸಾವಿರ ಯೋಧರನ್ನು ಕೇಂದ್ರ ಸರ್ಕಾರ ಕಣಿವೆ ರಾಜ್ಯದಲ್ಲಿ ನಿಯೋಜಿಸಿರುವುದು ಸ್ಥಳೀಯ ರಾಜಕಾರಣಿಗಳು ಹಾಗೂ ನಿವಾಸಿಗಳಿಗೂ ಯಕ್ಷಪ್ರಶ್ನೆಯಾಗಿದೆ. ಕಾಶ್ಮೀರಿಗಳು ಅಗತ್ಯ ವಸ್ತುಗಳನ್ನು ಸಂಗ್ರಹಿಸುವ ಕೆಲಸ ಆರಂಭಿಸಿದ್ದಾರೆ.