21 ಗ್ರಾಪಂಗಳಲ್ಲಿ ಪ್ರಧಾನಿ ಮೋದಿ ಸಂವಾದ
- ದೇಶಾದ್ಯಂತ ಏಕಕಾಲಕ್ಕೆ ಸುಮಾರು 1 ಗಂಟೆ ಸಮಯ ಸಂವಾದ ನಡೆದಿತ್ತು
- 21 ಗ್ರಾಪಂಗಳಿಂದ ಸಂವಾದ ಆಯೋಜಿಸಲಾಗಿತ್ತು
ಭದ್ರಾವತಿ(ಜು.13): ಸಂಜೀವಿನಿ- ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆಯಿಂದ ಗುರುವಾರ ತಾಲೂಕಿನ ಸಿಂಗನಮನೆ, ಅಂತರಗಂಗೆ, ಬಾರಂದೂರು, ಅರಕೆರೆ, ಕೂಡ್ಲಿಗೆರೆ, ಹಿರಿಯೂರು ಸೇರಿ ಒಟ್ಟು 21 ಗ್ರಾಪಂಗಳಿಂದ ಪ್ರಧಾನಿ ಮೋದಿ ಅವರೊಂದಿಗೆ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಪ್ರಧಾನಿಯೊಂದಿಗೆ ಆಯಾ ಗ್ರಾಪಂ ವ್ಯಾಪ್ತಿಯ ಗ್ರಾಮೀಣ ಜನರು ಹಾಗೂ ಗ್ರಾಪಂ ಅಧ್ಯಕ್ಷರು, ಸದಸ್ಯರು ನೇರವಾಗಿ ಸಂವಾದ ನಡೆಸಲು ಅಗತ್ಯ ಸಿದ್ದತೆ ಕೈಗೊಳ್ಳಲಾಗಿತ್ತು. ಆದರೆ ಯಾವ ಗ್ರಾಮ ಪಂಚಾಯಿತಿಯಲ್ಲೂ ಪ್ರಧಾನಿಯೊಂದಿಗೆ ಸಂವಾದ ನಡೆಸಲು ಸಾಧ್ಯವಾಗಿಲ್ಲ.
ದೇಶಾದ್ಯಂತ ಏಕಕಾಲಕ್ಕೆ ನಡೆದ ಸುಮಾರು 1 ಗಂಟೆ ಸಮಯದ ಸಂವಾದ ಸಮಯದಲ್ಲಿ ಸರ್ವರ್ ಸಮಸ್ಯೆ ಎದುರಾಯಿತು. ಈ ಹಿನ್ನೆಲೆಯಲ್ಲಿ ಸಂವಾದ ನಡೆಸಲು ಸಾಧ್ಯವಾಗಲಿಲ್ಲ ಎಂದು ಸಿಂಗನಮನೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ಪರಮೇಶ್ವರಪ್ಪ ತಿಳಿಸಿದರು.
ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಯಲ್ಲೂ ಪ್ರಧಾನಿ ಅವರೊಂದಿಗೆ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ದೇಶದ ಆಯ್ದ ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ನೇರವಾಗಿ ಸಂವಾದ ನಡೆದಿದೆ.