ಬುಧವಾರ ದೇಶದ ರೈತರ ಜೊತೆ ಮಾತುಕತೆ ನಡೆಸಲಿರುವ ಪ್ರಧಾನಿ ರೈತರ ಅಹವಾಲು, ಬೇಡಿಕೆಗಳಿಗೆ ಕಿವಿಯಾಗಲಿರುವ ಮೋದಿ
ಬೆಂಗಳೂರು: ಪ್ರಧಾನಿಯೊಂದಿಗೆ ನೇರವಾಗಿ ಮಾತುಕತೆ ನಡೆಸುವ ಸದಾವಕಾಶ ದೇಶದ ರೈತರಿಗೆ ಬುಧವಾರ ಸಿಗಲಿದೆ. ದೇಶದ ರೈತರ ಜೊತೆ ಪ್ರಧಾನಿ ಮೋದಿ ನೇರವಾಗಿ ಮಾತುಕತೆ ನಡೆಸಲಿದ್ದು, ಅವರ ಅಹವಾಲು, ಬೇಡಿಕೆಗಳಿಗೆ ಕಿವಿಯಾಗಲಿದ್ದಾರೆ.
ಪ್ರಧಾನಿ ಜೊತೆ ಮಾತನಾಡಲು ರೈತರು ದೆಹಲಿಗೂ ಹೋಗಬೇಕಾಗಿಲ್ಲ, ಅಥವಾ ಪ್ರಧಾನಿ ಗ್ರಾಮಕ್ಕೆ ಭೇಟಿ ನೀಡುವುದೂ ಇಲ್ಲ. ಪ್ರಧಾನಿ ಜೊತೆ ತಮ್ಮ ಅಹವಾಲುಗಳನ್ನು ಹೇಳಿಕೊಳ್ಳಲು ರೈತರು ತಮ್ಮ ಫೋನ್ನಲ್ಲಿ ‘ನಮೋ‘ ಆ್ಯಪ್ ಇನ್ಸ್ಟಾಲ್ ಮಾಡಿದರೆ ಸಾಕು. ಅದರ ಮೂಲಕ ಅವರ ಜೊತೆ ನೇರವಾಗಿ ಮಾತನಾಡಬಹುದು.
ಅಥವಾ ಹತ್ತಿರದ ಕೃಷಿ ವಿಜ್ಞಾನ ಕೇಂದ್ರ, ಸಾಮಾನ್ಯ ಸೇವಾ ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿರುವ ವ್ಯವಸ್ಥೆ ಮೂಲಕ ಪ್ರಧಾನಿ ಜೊತೆ ಸಂವಾದ ನಡೆಸಬಹುದಾಗಿದೆ. ಬುಧವಾರ ಬೆಳಗ್ಗೆ 9.30 ಗಂಟೆಗೆ ಪ್ರಧಾನಿ ಖುದ್ದಾಗಿ ರೈತರ ಜೊತೆ ಸಂವಾದ ನಡೆಸಲಿದ್ದಾರೆ.
ಪ್ರಧಾನಿ ಮೋದಿ ಈ ಹಿಂದೆ ನಮೋ ಆ್ಯಪ್ ಮೂಲಕ ಬಿಜೆಪಿ ಕಾರ್ಯಕರ್ತರು, ಶಾಸಕ, ಸಂಸದರ ಜೊತೆ ಸಂವಾದ ನಡೆಸಿದ್ದರು.
