ಬಿಜೆಪಿಗರಿಗೆ ಪ್ರಧಾನಿ ಮೋದಿ ಲಗಾಮು
ಇತ್ತೀಚೆಗೆ ಸೂಕ್ಷ್ಮ ವಿಚಾರಗಳ ಬಗ್ಗೆ ಬಿಜೆಪಿ ಶಾಸಕ, ಸಂಸದರು, ಸಚಿವರು ಮನಬಂದಂತೆ ಹೇಳಿಕೆ ನೀಡುತ್ತಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನವದೆಹಲಿ: ಇತ್ತೀಚೆಗೆ ಸೂಕ್ಷ್ಮ ವಿಚಾರಗಳ ಬಗ್ಗೆ ಬಿಜೆಪಿ ಶಾಸಕ, ಸಂಸದರು, ಸಚಿವರು ಮನಬಂದಂತೆ ಹೇಳಿಕೆ ನೀಡುತ್ತಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳಿಗೆ ಆಹಾರವಾಗಿ, ಪಕ್ಷಕ್ಕೆ ಹಾಗೂ ಸರ್ಕಾರಕ್ಕೆ ಕೆಟ್ಟ ಹೆಸರು ತರಬಲ್ಲ ಈ ಹೇಳಿಕೆಗಳನ್ನು ನೀಡದಂತೆ ಅವರು ತಾಕೀತು ಮಾಡಿದ್ದಾರೆ. ಪಕ್ಷದ ಶಾಸನಸಭಾ ಸದಸ್ಯರೊಂದಿಗೆ ಭಾನುವಾರ ‘ನಮೋ ಆ್ಯಪ್’ ಮೂಲಕ ವಿಡಿಯೋ ಕಾನ್ಫರೆನ್ಸ್ನಲ್ಲಿ ಮಾತನಾಡಿದ ಮೋದಿ, ‘ನಿಮ್ಮ ವಿವಾದಿತ ಹೇಳಿಕೆಗಳಿಂದ ಪಕ್ಷ ಹಾಗೂ ಸರ್ಕಾರದ ವರ್ಚಸ್ಸಿಗೆ ಧಕ್ಕೆ ಬರುತ್ತದೆ.
ಹೀಗಾಗಿ ಬೇಜವಾಬ್ದಾರಿ ಹೇಳಿಕೆ ನೀಡಬೇಡಿ’ ಎಂದು ಕಿವಿಮಾತು ಹೇಳಿದರು. ‘ನಾವು ತಪ್ಪು ಮಾಡುತ್ತೇವೆ. ಇದು ಮಾಧ್ಯಮಗಳಿಗೆ ‘ಮಸಾಲೆ’ ಒದಗಿಸುತ್ತದೆ. ನಾವು ವಿಷಯ ವಿಶ್ಲೇಷಣೆ ಮಾಡಬಲ್ಲ ದೊಡ್ಡ ಸಾಮಾಜಿಕ ವಿಜ್ಞಾನಿಗಳು ಹಾಗೂ ತಜ್ಞರು. ಕ್ಯಾಮರಾ ಕಂಡ ತಕ್ಷಣ ಮಾತಾಡಲು ಶುರು ಮಾಡುತ್ತೇವೆ. ಆಗ ಮಾಡುವ ಪ್ರಮಾದಗಳು ಮಾರಕವಾಗಿ ಪರಿಣಮಿಸುತ್ತವೆ’ ಎಂದು ಸೂಚ್ಯವಾಗಿ ಹೇಳಿದರು.
ಇತ್ತೀಚೆಗೆ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರು ಸಂವಿಧಾನದ ಬಗ್ಗೆ ಆಡಿದ ಮಾತುಗಳು ದೇಶಾದ್ಯಂತ ತಲ್ಲಣ ಸೃಷ್ಟಿಸಿದ್ದವು. ಅಲ್ಲದೆ, ಅತ್ಯಾಚಾರ ಪ್ರಕರಣಗಳ ಬಗ್ಗೆ ಬಿಜೆಪಿ ಮುಖಂಡರು ಆಡಿದ ಮಾತುಗಳು ಪಕ್ಷಕ್ಕೆ ಸಾಕಷ್ಟು ಮುಜುಗರ ತಂದಿದ್ದವು.