ಪ್ರಧಾನಿ ನರೇಂದ್ರ ಮೋದಿ ಅವಧಿಯಲ್ಲಿ ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ  ಹೇಳಿದ್ದಾರೆ. ಅಲ್ಲದೇ ಅವರು ತಾವು ಆಪಾದಿಸಿದ ಸತ್ಯಾಂಶ ಪರಿಶೀಲಿಸಿ ಎಂದು ಸವಾಲು ಹಾಕಿದ್ದಾರೆ. 

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ವಾಗ್ದಾಳಿ ಮುಂದುವರಿಸಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ‘ಮೋದಿ ಸರ್ಕಾರದ ಅವಧಿಯಲ್ಲಿ ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಬಗ್ಗೆ ಶನಿವಾರ ಟ್ವೀಟ್‌ ಮಾಡಿರುವ ಗಾಂಧಿ, ‘ಮಿ.56 ಇಂಚು ಎದೆಯ ಆತ್ಮೀಯ ಸ್ನೇಹಿತರೇ... ದಲಿತರು ಹಾಗೂ ಆದಿವಾಸಿಗಳ ಮೇಲೆ ದೌರ್ಜನ್ಯ ಹೆಚ್ಚುತ್ತಿದೆ ಎಂದು ಈ ಹಿಂದೆ ನಾನು ಆಪಾದಿಸಿದಾಗ ಸತ್ಯಾಂಶ ಪರಿಶೀಲಿಸಿ ಎಂದು ಸವಾಲು ಎಸೆದಿದ್ದಿರಿ. 

ಈಗ ನಾನು ಸತ್ಯಾಂಶ ಪರಿಶೀಲಿಸಿದ್ದೇನೆ. ಅದರ ಲಗತ್ತು ಇಲ್ಲೇ ಇದೆ. ಇದನ್ನು ನೋಡಿ 56 ಇಂಚಿನ ಎದೆಯವರು ನಿದ್ರೆಯ ಮಂಪರಿನಿಂದ ಎಚ್ಚೆತ್ತುಕೊಳ್ಳಲಿದ್ದಾರೆ’ ಎಂದು ‘2016ರಲ್ಲಿ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಪರಿಶಿಷ್ಟಜಾತಿಯವರ ಮೇಲೆ ದೌರ್ಜನ್ಯ ಹೆಚ್ಚಿದೆ’ ಎಂದು 2016ರ ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋದ ಅಂಕಿ-ಅಂಶಗಳನ್ನು ಉಲ್ಲೇಖಿಸಿ ಪ್ರಕಟವಾದ ಮಾಧ್ಯಮ ವರದಿಯೊಂದನ್ನು ಲಗತ್ತಿಸಿದ್ದಾರೆ.