ಶೀಘ್ರವೇ ಧಾರವಾಡ ಐಐಟಿಗೆ ಮೋದಿ ಶಂಕು?
ಜನವರಿಯಲ್ಲಿ ನಡೆಯಲಿರುವ ಧಾರವಾಡ ಐಐಟಿ ಶಂಕುಸ್ಥಾಪನೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಮಂತ್ರಣ ನೀಡಿದ್ದು, ಅವರು ಆಗಮಿಸುವ ಸಾಧ್ಯತೆ ಇದೆ ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದ್ದಾರೆ.
ಧಾರವಾಡ : ಜನವರಿಯಲ್ಲಿ ನಡೆಯಲಿರುವ ಧಾರವಾಡ ಐಐಟಿ ಶಂಕುಸ್ಥಾಪನೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಮಂತ್ರಣ ನೀಡಿದ್ದು, ಅವರು ಆಗಮಿಸುವ ಸಾಧ್ಯತೆ ಇದೆ ಎಂದು ಸಂಸದ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, .3 ಸಾವಿರ ಕೋಟಿ ವೆಚ್ಚದಲ್ಲಿ ಐಐಟಿ ನಿರ್ಮಾಣವಾಗಲಿದ್ದು, ಈಗಾಗಲೇ .1,200 ಕೋಟಿ ಬಿಡುಗಡೆಯಾಗಿದೆ. ಮುಂದಿನ ತಿಂಗಳು ಕಟ್ಟಡ ನಿರ್ಮಾಣಕ್ಕೆ ಪ್ರಧಾನಿ ಮೋದಿಯವರು ಆಗಮಿಸಿ ಚಾಲನೆ ನೀಡಲಿದ್ದಾರೆ. ಈ ಬಗ್ಗೆ ಪ್ರಧಾನಿಯವರ ಆಪ್ತ ಸಹಾಯಕರ ಜತೆಗೆ ಮಾತುಕತೆ ನಡೆದಿದೆ ಎಂದು ಹೇಳಿದರು.
ಇನ್ನು ಬಿಐಎಸ್ (ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಸ್) ಕಚೇರಿ ಶೀಘ್ರ ನಿರ್ಮಾಣವಾಗಲಿದ್ದು, ಇದರಿಂದ ಜಿಲ್ಲೆಯ ಕೈಗಾರಿಕಾ ಕ್ಷೇತ್ರಕ್ಕೆ ಸಾಕಷ್ಟುಅನುಕೂಲವಾಗಲಿದೆ. ಇದರ ಉದ್ಘಾಟನೆಗೆ ರಾಮ್ವಿಲಾಸ್ ಪಾಸ್ವಾನ್ ಬರಲಿದ್ದಾರೆ ಎಂದರು.
ರಾಮನಗರದಲ್ಲಿ ಏಮ್ಸ್ಗೆ ವಿರೋಧ: ಇನ್ನು, ರಾಜ್ಯಕ್ಕೆ ಮಂಜೂರಾದ ಏಮ್ಸ್ (ಆಲ್ ಇಂಡಿಯಾ ಮೆಡಿಕಲ್ ಸೈನ್ಸ್) ನಿರ್ಮಾಣಕ್ಕೆ ರಾಜ್ಯದ ಧಾರವಾಡ, ರಾಮನಗರ, ವಿಜಯಪುರಗಳ ಹೆಸರು ಪ್ರಸ್ತಾವನೆಯಲ್ಲಿತ್ತು. ಪ್ರಸ್ತುತ ಜೆಡಿಎಸ್ ಅದನ್ನು ರಾಮನಗರದಲ್ಲಿ ನಿರ್ಮಿಸಲು ತೀರ್ಮಾನ ಕೈಗೊಂಡಿದೆ. ಇದರಿಂದ ಪ್ರಯೋಜನವಿಲ್ಲ. ಧಾರವಾಡದಲ್ಲಿ ಏಮ್ಸ್ ನಿರ್ಮಿಸಲು ಸಮಸ್ಯೆಯಿದ್ದರೆ ವಿಜಯಪುರದಲ್ಲಾದರೂ ಉತ್ತಮ ಅವಕಾಶವಿದೆ. ಆದರೆ ಸಮ್ಮಿಶ್ರ ಸರ್ಕಾರದ ಪಾಲುದಾರ ಜೆಡಿಎಸ್ ರಾಮನಗರದಲ್ಲಿ ನಿರ್ಮಿಸಲು ನಿರ್ಧಾರ ಕೈಗೊಂಡು ಮುಂದುವರಿದರೆ ತೀವ್ರ ವಿರೋಧ ವ್ಯಕ್ತಪಡಿಸಲಾಗುವುದು ಎಂದು ಹೇಳಿದರು.