ಬಾಬ್ರಿ ಮಸೀದಿ ಕಕ್ಷಿದಾರರನ್ನು ಹೊಗಳಿದ ಪ್ರಧಾನಿ ಮೋದಿ
ಬಾಬ್ರಿ ಮಸೀದಿ- ರಾಮಮಂದಿರ ಪ್ರಕರಣದಲ್ಲಿ ಮಸೀದಿ ಪರ ಕಕ್ಷಿದಾರರಾಗಿರುವ ಸುನ್ನಿ ವಕ್ಫ್ ಮಂಡಳಿಯ ಕ್ರಮವನ್ನು ಇಂದು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ.
ನೇತ್ರಾಂಗ್, ಗುಜರಾತ್: ಬಾಬ್ರಿ ಮಸೀದಿ- ರಾಮಮಂದಿರ ಪ್ರಕರಣದಲ್ಲಿ ಮಸೀದಿ ಪರ ಕಕ್ಷಿದಾರರಾಗಿರುವ ಸುನ್ನಿ ವಕ್ಫ್ ಮಂಡಳಿಯ ಕ್ರಮವನ್ನು ಇಂದು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ.
ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟಿನಲ್ಲಿ ಸುನ್ನಿ ವಕ್ಫ್ ಮಂಡಳಿ ಪರವಾಗಿ ವಾದಿಸುತ್ತಿರುವ ಹಿರಿಯ ವಕೀಲ ಹಾಗೂ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಹೇಳಿಕೆಗೆ ಖುದ್ದು ಮಂಡಳಿಯೇ ವಿರೋಧ ವ್ಯಕ್ತಪಡಿಸಿರುವ ಕ್ರಮವು ಪ್ರಶಾಂಸಾರ್ಹವೆಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಗುಜರಾತಿನ ನೇತ್ರಾಂಗ್’ನಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿ ಮಾತನಾಡಿದ ಮೋದಿ, ಕಪಿಲ್ ಸಿಬಲ್ ಹೇಳಿಕೆಯನ್ನು ಅಲ್ಲಗಳೆದ ಸುನ್ನಿ ವಕ್ಫ್ ಮಂಡಳಿಯ ದಿಟ್ಟ ಕ್ರಮವನ್ನು ಮೆಚ್ಚಲೇ ಬೇಕು ಎಂದು ಮೋದಿ ಹೇಳಿದ್ದಾರೆ.
ಪ್ರಕರಣದ ವಿಚಾರಣೆಯನ್ನು 2019 ಲೋಕಸಭೆ ಚುನಾವಣೆಯ ಬಳಿಕ ಜುಲೈಯಲ್ಲಿ ನಡೆಸುವಂತೆ ನಿನ್ನೆ ಸುಪ್ರೀಂ ಕೋರ್ಟಿನಲ್ಲಿ ಕಪಿಲ್ ಸಿಬಲ್ ವಾದಿಸಿದ್ದರು.
ಕಪಿಲ್ ಸಿಬಲ್ ನಮ್ಮ ವಕೀಲರು. ಅವರು ರಾಜಕೀಯ ಪಕ್ಷದೊಂದಿಗೂ ಸಂಬಂಧ ಹೊಂದಿದ್ದಾರೆ. ಅವರು ಕೋರ್ಟಿನಲ್ಲಿ ನಿನ್ನೆ ಮಂಡಿಸಿರುವ ವಾದ ಸರಿಯಲ್ಲ. ಆದಷ್ಟು ಶೀಘ್ರದಲ್ಲಿ ಪ್ರಕರಣ ಇತ್ಯರ್ಥವಾಗಬೇಕೆಂದು ನಾವು ಬಯಸುತ್ತೇವೆ. ನಮ್ಮ ನಿಲುವಿಗೂ, ಅವರ ಹೇಳಿಕೆಗೂ ಯಾವುದೇ ಸಂಬಂಧವಿಲ್ಲವೆಂದು, ಸುನ್ನಿ ವಕ್ಫ್ ಮಂಡಳಿಯ ಹಾಜಿ ಮಹಬೂಬ್ ಹೇಳಿದ್ದಾರೆ.
ಕಪಿಲ್ ಸಿಬಲ್ ವಾದವನ್ನು ಪುರಸ್ಕರಿಸದ ಸುಪ್ರೀಂ ಕೋರ್ಟ್, ಮುಂದಿನ ವಿಚಾರಣೆಯನ್ನು ಮುಂಬರುವ ಫೆ.08ಕ್ಕೆ ನಿಗದಿಪಡಿಸಿದೆ.