ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ| ದೆಹಲಿಯ ಕೆಂಪು ಕೋಟೆಯಲ್ಲಿ ಸಂಗ್ರಹಾಲಯ ಉದ್ಘಾಟನೆ| ನೇತಾಜಿ ಸುಭಾಷ್ ಚಂದ್ರ ಬೋಸ್ ವಸ್ತು ಸಂಗ್ರಹಾಲಯ ಉದ್ಘಾಟಿಸಿದ ಪ್ರಧಾನಿ ಮೋದಿ| ಸಂಗ್ರಹಾಲಯ ಪ್ರಜೆಗಳಲ್ಲಿ ದೇಶಭಕ್ತಿ ಹೆಚ್ಚಿಸಲು ಎಂಬ ಆಶಯ| ರಾಷ್ಟ್ರಪತಿ ಕೋವಿಂದ್ ಅವರಿಂದ ಟ್ವೀಟ್ ಮೂಲಕ ನಮನ
ನವದೆಹಲಿ(ಜ.23): ಸುಭಾಷ್ ಚಂದ್ರ ಬೋಸ್ ಜಯಂತಿ ಅಂಗವಾಗಿ ದೆಹಲಿಯ ಕೆಂಪು ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ನೇತಾಜಿ ಸುಭಾಷ್ ಚಂದ್ರ ಬೋಸ್ ವಸ್ತು ಸಂಗ್ರಹಾಲಯವನ್ನು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ದೇಶದ ಸಂಪದ್ಭರಿತ ಐತಿಹಾಸಿಕ ಕ್ಷಣಗಳು ಮತ್ತು ನಮ್ಮ ಯುವಜನತೆಯ ನಡುವಿನ ಸಂಬಂಧವನ್ನು ಈ ಸಂಗ್ರಹಾಲಯ ಹೇಳಲಿದ್ದು ಪ್ರಜೆಗಳಲ್ಲಿ ದೇಶಭಕ್ತಿಯನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.
ಇನ್ನು ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಕುರಿತ ದೆಹಲಿಯ ಕೆಂಪು ಕೋಟೆಯಲ್ಲಿನ ಸಂಗ್ರಹಾಲಯಕ್ಕೆ ಕೂಡ ಪ್ರಧಾನಿ ಭೇಟಿ ನೀಡಿದರು.
ಇದಕ್ಕೂ ಮುನ್ನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಸ್ವಾತಂತ್ರ್ಯ ಹೋರಾಟಗಾರ ನೇತಾಜಿಗೆ ಗೌರವ ನಮನ ಸಲ್ಲಿಸಿದ್ದರು.
