Asianet Suvarna News Asianet Suvarna News

ಕಟ್ಟಡಗಳಲ್ಲಿ ಮೊಬೈಲ್‌ ಟವರ್‌ ಅಳವಡಿಸಲು ಅನುಮತಿ ಕಡ್ಡಾಯ

ಕಟ್ಟಡಗಳಲ್ಲಿ ಮೊಬೈಲ್‌ ಟವರ್‌ ಅಳವಡಿಸಲು ಅನುಮತಿ ಬೇಕು | ಪೇಯಿಂಗ್‌ ಗೆಸ್ಟ್‌ಗಳ ನಿಯಂತ್ರಣಕ್ಕೂ ಕಾನೂನು: ಖಾದರ್‌ 

Permission mandatory to mobile tower on buildings says U T Khadar
Author
Bengaluru, First Published May 30, 2019, 9:42 AM IST

ಬೆಂಗಳೂರು (ಮೇ. 30):  ಕಟ್ಟಡಗಳ ಮೇಲೆ ಮೊಬೈಲ್‌ ಟವರ್‌ ಸೇರಿದಂತೆ ಎಲ್ಲ ಬಗೆಯ ಟವರ್‌ ಅಳವಡಿಕೆಗೆ ಕಡ್ಡಾಯವಾಗಿ ಅನುಮತಿ ಪಡೆಯುವ ನಿಯಮ ಜಾರಿಗೆ ತರಲಾಗುವುದು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್‌ ತಿಳಿಸಿದ್ದಾರೆ.

ಕಟ್ಟಡಕ್ಕೆ ಅನುಮತಿ ಪಡೆದು ಅನೇಕರು ಮೊಬೈಲ್‌ ಟವರ್‌ ಅಳವಡಿಸಲು ಅವಕಾಶ ಕೊಡುತ್ತಿದ್ದಾರೆ. ಎರಡು-ಮೂರು ಅಂತಸ್ತಿನ ಕಟ್ಟಡಕ್ಕೆ ಅನುಮತಿ ಪಡೆದ ಮೇಲೆ ಭಾರೀ ಭಾರದ ಟವರ್‌ ಅಳವಡಿಕೆಯಿಂದ ಕಟ್ಟಡಕ್ಕೆ ಹಾನಿಯಾಗಿ ಅವಘಡ ಸಂಭವಿಸುವ ಸಾಧ್ಯತೆ ಇರುತ್ತದೆ.

ಇದರ ಜೊತೆಗೆ ಶಾಲೆ, ಕಾಲೇಜು, ಆಸ್ಪತ್ರೆಗಳ ಸಮೀಪದಲ್ಲಿ ಇಂತಹ ಟವರ್‌ಗಳನ್ನು ಸ್ಥಾಪಿಸಲಾಗಿದೆ. ಇಂತಹ ಟವರ್‌ಗಳಿಂದ ವಿಕಿರಣ ಹರಡುತ್ತಿದೆ ಎಂಬ ಅನೇಕ ದೂರುಗಳು ಕೇಳಿ ಬರುತ್ತಿವೆ. ಇದಕ್ಕೆಲ್ಲ ಕಡಿವಾಣ ಹಾಕುವ ಉದ್ದೇಶದಿಂದ ಟವರ್‌ ಅಳವಡಿಕೆಗೆ ಪ್ರತ್ಯೇಕ ಅನುಮತಿ ಪಡೆಯುವ ನಿಯಮ ಜಾರಿಗೆ ತರಲಾಗುವುದು ಎಂದರು.

ಟವರ್‌ ಅಳವಡಿಕೆ ಕೋರಿ ಬಂದ ಅರ್ಜಿಗಳಿಗೆ ಅನುಮತಿ ನೀಡುವ ಮುನ್ನ ಸಂಬಂಧಪಟ್ಟಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಕಟ್ಟಡ ಭಾರ ತಡೆಯುವ ಸಾಮರ್ಥ್ಯದ ಪರಿಶೀಲನೆ, ಟವರ್‌ ಸಮೀಪ ಆಸ್ಪತ್ರೆ, ಶಾಲೆ-ಕಾಲೇಜು ಇತ್ಯಾದಿಗಳು ಇವೆಯೇ ಎಂಬುದನ್ನು ಪರಿಶೀಲಿಸಲಿದ್ದಾರೆ. ನಂತರವಷ್ಟೇ ಅನುಮತಿ ನೀಡಲಿದ್ದಾರೆ. ಈಗಾಗಲೇ ಟವರ್‌ ಅಳವಡಿಸಿಕೊಂಡಿರುವ ಕಟ್ಟಡಗಳು ಅನುಮತಿ ಪಡೆಯದಿದ್ದರೆ ಸಂಬಂಧಪಟ್ಟಸಂಸ್ಥೆಗಳಿಂದ ಅನುಮತಿ ಪಡೆಯಬೇಕಾಗುತ್ತದೆ ಎಂದು ಹೇಳಿದರು.

ಪಿಜಿಗಳಿಗೆ ಪ್ರತ್ಯೇಕ ನೀತಿ:

ಪೇಯಿಂಗ್‌ ಗೆಸ್ಟ್‌ಗಳಿಗಾಗಿ ಪ್ರತ್ಯೇಕ ಕಾನೂನು ಜಾರಿಗೆ ತರಲು ಉದ್ದೇಶಿಸಲಾಗಿದೆ. ಪಿಜಿಗಳಿಂದ ಯಾರಿಗೂ ಮೋಸ ಆಗದಂತೆ ನಿಯಂತ್ರಿಸಲು ಹಾಗೂ ಪಿಜಿಗಳಲ್ಲಿ ವಾಸ ಮಾಡುವವರಿಗೆ ಭದ್ರತೆ ಒದಗಿಸಲು ನಿಯಮ ರೂಪಿಸಲಾಗುವುದು ಎಂದರು.

ಹಸಿರು ಕಟ್ಟಡ ನೀತಿ:

ನಗರ ಪ್ರದೇಶಗಳಲ್ಲಿರುವ ಪಾರಂಪರಿಕ ಕಟ್ಟಡಗಳ ನಿರ್ವಹಣೆ, ನೀರಿನ ಸೂಕ್ತ ನಿರ್ವಹಣೆ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯ ಮಾಡಲು ಹೊಸ ನೀತಿ ರೂಪಿಸಲು ಉದ್ದೇಶಿಸಲಾಗಿದೆ ಎಂದ ಸಚಿವರು, ‘ವಿಷನ್‌ 2020’ ಅಡಿ ಪ್ರತಿ ನಗರಗಳಿಗೂ 125-150 ಕೋಟಿ ರು.ಗಳ ವಿಶೇಷ ಅನುದಾನವನ್ನು ಅಭಿವೃದ್ಧಿ ಯೋಜನೆಗಳಿಗೆ ನೀಡಲಾಗುವುದು ಎಂದರು.

ಇಲಾಖೆಯಿಂದ ನಿರ್ವಹಣೆ:

ನಗರ ಪ್ರದೇಶಗಳಲ್ಲಿ ನೀರು ಸರಬರಾಜು ವ್ಯವಸ್ಥೆಯನ್ನು ಈವರೆಗೆ ನೀರು ಸರಬರಾಜು ಮಂಡಳಿ ಮಾಡುತ್ತಿತ್ತು. ಇದರ ನಿರ್ವಹಣೆಯನ್ನು ಸ್ಥಳೀಯ ಸಂಸ್ಥೆಗಳಿಗೆ ನೀಡಲಾಗಿತ್ತು. ಆದರೆ ನಗರ ಸ್ಥಳೀಯ ಸಂಸ್ಥೆಗಳು ಸರಿಯಾಗಿ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಸಾಕಷ್ಟುದೂರುಗಳು ಕೇಳಿ ಬರುತ್ತಿತ್ತು.

ಈ ಹಿನ್ನೆಲೆಯಲ್ಲಿ ನೀರು ಸರಬರಾಜು ವ್ಯವಸ್ಥೆಯನ್ನು ಮಂಡಳಿಯೇ ವಹಿಸಿಕೊಳ್ಳಲಿದೆ. ನೀರು ವಿತರಣಾ ವ್ಯವಸ್ಥೆಯನ್ನು ಮಾತ್ರ ಸ್ಥಳೀಯ ಸಂಸ್ಥೆಗಳೇ ಮಾಡಲಿವೆ ಎಂದು ಸಚಿವ ಯು.ಟಿ. ಖಾದರ್‌ ತಿಳಿಸಿದರು.
 

Follow Us:
Download App:
  • android
  • ios