‘ಮೋದಿ-ಶಾ ದೇಶಕ್ಕೆ ಅಪಾಯಕಾರಿಯೆಂದು ಜನರಿಗೆ ಗೊತ್ತಾಗಿದೆ’
- ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ 4 ವರ್ಷ
- ‘ಇಂಡಿಯಾ ಬಿಟ್ರೇಯ್ಡ್‘ [ಭಾರತಕ್ಕೆ ವಿಶ್ವಾಸಘಾತ] ಪುಸ್ತಕ ಬಿಡುಗಡೆ
- ವಿಶ್ವಾಸಘಾತ, ಮೋಸ, ಸೇಡು ಮತ್ತು ಸುಳ್ಳುಗಳ ಸರ್ಕಾರ
ನವದೆಹಲಿ: ನರೇಂದ್ರ ಸರ್ಕಾರ ನೇತೃತ್ವದ ಕೇಂದ್ರ ಸರ್ಕಾರ 4 ವರ್ಷ ಪೂರೈಸಿದ್ದು, ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಟೀಕಾಪ್ರಹಾರಗೈದಿದೆ.
ಎನ್ಡಿಎ ಸರ್ಕಾರದ 4 ವರ್ಷಗಳ ಬಳಿಕ, ಮೋದಿ-ಶಾ ಜೋಡಿಯು ದೇಶಕ್ಕೆ ಅಪಾಯಕಾರಿಯೆಂದು ಜನತೆಗೆ ಅರ್ಥವಾಗಿದೆಯೆಂದು ಕಾಂಗ್ರೆಸ್ ಹೇಳಿದೆ.
ಈ ಸಂದರ್ಭದಲ್ಲಿ ಇಂಡಿಯಾ ಬಿಟ್ರೇಯ್ಡ್‘ [ಭಾರತಕ್ಕೆ ವಿಶ್ವಾಸಘಾತ] ಎಂಬ ಪುಸ್ತಕ ಬಿಡುಗಡೆ ಮಾಡಿದ ಕಾಂಗ್ರೆಸ್ ನಾಯಕರು, ಎನ್ಡಿಎ ಆಡಳಿತದಲ್ಲಿ ದೇಶಾದ್ಯಂತ ಭಯ ಹಾಗೂ ದ್ವೇಷದ ವಾತಾವರಣ ನಿರ್ಮಾಣವಾಗಿದೆಯೆಂದು ಹೇಳಿದ್ದಾರೆ.
ಮೋದಿ ನೇತೃತ್ವದ ಕಳೆದ ನಾಲ್ಕು ವರ್ಷಗಳನ್ನು ನಾಲ್ಕು ಪದಗಳಲ್ಲಿ ವ್ಯಾಖ್ಯಾನಿಸುವುದಾದರೆ, ವಿಶ್ವಾಸಘಾತ, ಮೋಸ, ಸೇಡು ಮತ್ತು ಸುಳ್ಳುಗಳ ಸರ್ಕಾರವಾಗಿದೆಯೆಂದು ಕಾಂಗ್ರೆಸ್ ಟೀಕಿಸಿದೆ.
ದಲಿತ, ಅಲ್ಪಸಂಖ್ಯಾತ, ಆದಿವಾಸಿ ಹಾಗೂ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯವನ್ನು ಉಲ್ಲೇಖಿಸಿದ ಕಾಂಗ್ರೆಸ್ ನಾಯಕರು, ಭಾರತದಲ್ಲಿ ಯಾರೂ ಸುರಕ್ಷಿತರಲ್ಲವೆಂಬ ಭಾವನೆ ನಿರ್ಮಾಣವಾಗಿದೆ, ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂಡಿಯಾ ಬಿಟ್ರೇಯ್ಡ್ ಎಂಬ ಪುಸ್ತಕದಲ್ಲಿ ಎನ್ಡಿಎ ಸರ್ಕಾರದ ದುರಾಡಳಿತದ ಬಗ್ಗೆ ವಿವರಿಸಿದ್ದು, ಪ್ರಧಾನಿ ಮೋದಿಗೆ 40 ಪ್ರಶ್ನೆಗಳನ್ನು ಕೇಳಲಾಗಿದೆ.