ರಾಮಸೇತುವಿನ ಮನಮೋಹಕ ದೃಶ್ಯವನ್ನು ಆಸ್ವಾದಿಸಿದ ಜನ |  ಈ ಸ್ಥಳವನ್ನು ನ್ಯಾಷನಲ್ ಹೆರಿಟೇಜ್ ಸ್ಥಳವಾಗಿ ಘೋಷಿಸಬೇಕೆಂದು ಸ್ವಾಮಿ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

ಬೆಂಗಳೂರು (ಅ. 08): ರಾಮಸೇತುವಿನ ಅದ್ಭುತ ದೃಶ್ಯ ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದರೊಂದಿಗೆ, ‘ನೋಡಿ ಜನರು ಸಮುದ್ರದ ಮಧ್ಯದಲ್ಲಿ ನಿಂತಿದ್ದಾರೆ! ಇದು ಸಂಪೂರ್ಣ ಇಂಜಿನಿಯರಿಂಗ್ ಮಾರ್ವೆಲ್.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದು ಬೇರಾವ ಸ್ಥಳವೂ ಅಲ್ಲ ಪುರಾಣ ಪ್ರಸಿದ್ಧಿ ಪಡೆದ ರಾಮಸೇತು. ಈ ಸ್ಥಳವನ್ನು ನ್ಯಾಷನಲ್ ಹೆರಿಟೇಜ್ ಸ್ಥಳವಾಗಿ ಘೋಷಿಸಬೇಕೆಂದು ಸ್ವಾಮಿ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಅವರಿಗೆ ಧನ್ಯವಾದ. ಜೈ ಶ್ರೀರಾಮ್’ ಎಂದು ಒಕ್ಕಣೆಯನ್ನು ಬರೆಯಲಾಗಿದೆ.

ವಿಡಿಯೋದಲ್ಲಿ ಸಮುದ್ರದ ವ್ಯೆಹಾತ್ಮಕ ದೃಶವಿದ್ದು, ಅದರ ಮಧ್ಯಭಾಗದಲ್ಲಿ ನೂರಾರು ಜನರು ಸಾಲುಗಟ್ಟಿ ನಿಂತಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಆದರೆ ನಿಜಕ್ಕೂ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಈ ವಿಡಿಯೋ ರಾಮಾಯಣದಲ್ಲಿ ಬರುವ ಪುರಾಣ ಪ್ರಸಿದ್ಧ ರಾಮಸೇತುವಿನದ್ದೇ ಎಂದು ಪರಿಶೀಲಿಸಿದಾಗ ಇದು ರಾಮಸೇತುವಿನ ವಿಡಿಯೋ ಅಲ್ಲ ಎಂಬುದು ದೃಢಪಟ್ಟಿದೆ.

ವಾಸ್ತವವಾಗಿ ಈ ವಿಡಿಯೋ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿರುವ ಪೊನ್ನಾಯ್ ಬೀಚ್. ಇದೇ ಜುಲೈನಲ್ಲಿ ಕೇರಳದಲ್ಲಿ ಭೀಕರ ಪ್ರವಾಹ ಉಂಟಾದ ಬಳಿಕ ಈ ಬೀಚ್‌ನಲ್ಲಿ ಮರಳ ರಾಶಿಯೇ ನಿಂತು ಈ ದೃಶ್ಯ
ಉದ್ಭವವಾಗಿದೆ. ಮರಳಿನ ಮೇಲೆ ನಿಂತು ಬೀಚ್ನ ಅರ್ಧ ದೂರದವರೆಗೂ ಜನರು ನಿಂತಿದ್ದಾರೆ.

ಈ ದೃಶ್ಯವನ್ನು ಅಭಿಲಾಷ್ ವಿಶ್ವ ಎಂಬುವರು ಚಿತ್ರೀಕರಿಸಿ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಅಪ್ ಲೋಡ್ ಮಾಡಿದ್ದರು. ಅದು ರಾಮಸೇತುವಿನ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ಸ್ವತಃ ಅಭಿಲಾಷ್ ವಿಶ್ವ ಅವರೇ ಸ್ಪಷ್ಟನೆ ನೀಡಿದ್ದು, ಇದು ರಾಮಸೇತುವಿನ ದೃಶ್ಯ ಅಲ್ಲ. ಕೇರಳದ ಪೊನ್ನಾಯ್ ಸಮುದ್ರತೀರದ ದೃಶ್ಯ ಎಂದಿದ್ದಾರೆ.

-ವೈರಲ್ ಚೆಕ್