ರೈಲಿಗೆ ನವಿಲು ಡಿಕ್ಕಿ: 1 ತಾಸು ನಿಂತ ರೈಲು
ನವಿಲು ಡಿಕ್ಕಿ ಹೊಡೆದ ಪರಿಣಾಮ ಒಂದು ತಾಸಿಗೂ ಹೆಚ್ಚುಕಾಲ ರೈಲು ನಿಲುಗಡೆಗೊಂಡ ಘಟನೆ ಚನ್ನಪಟ್ಟಣದ ರೈಲು ನಿಲ್ದಾಣದ ಬಳಿ ಶನಿವಾರ ಬೆಳಿಗ್ಗೆ ನಡೆದಿದೆ.
ಚನ್ನಪಟ್ಟಣ: ನವಿಲು ಡಿಕ್ಕಿ ಹೊಡೆದ ಪರಿಣಾಮ ಒಂದು ತಾಸಿಗೂ ಹೆಚ್ಚುಕಾಲ ರೈಲು ನಿಲುಗಡೆಗೊಂಡ ಘಟನೆ ಇಲ್ಲಿನ ರೈಲು ನಿಲ್ದಾಣದ ಬಳಿ ಶನಿವಾರ ಬೆಳಿಗ್ಗೆ ನಡೆದಿದೆ.
ಮೈಸೂರು ಕಡೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಮಾಲ್ಗುಡಿ ಎಕ್ಸ್ಪ್ರೆಸ್ ರೈಲು ಇನ್ನೇನು ಚನ್ನಪಟ್ಟಣ ರೈಲ್ವೆ ನಿಲ್ದಾಣ ಸಮೀಪಿಸಬೇಕು ಎಂಬ ವೇಳೆಗೆ ನವಿಲು ಹಾರಿ ಬಂದು ರೈಲಿನ ಪವರ್ ಬಾಕ್ಸ್ಗೆ ಡಿಕ್ಕಿ ಹೊಡೆದು ಸಾವಿಗೀಡಾಗಿದೆ. ಪವರ್ ಬಾಕ್ಸ್ಗೆ ನವಿಲು ಡಿಕ್ಕಿ ಹೊಡೆದ ಪರಿಣಾಮ ಇಂಜಿನ್ಗೆ ವಿದ್ಯುತ್ ಸರಬರಾಜು ಸ್ಥಗಿತ ಗೊಂಡಿದೆ.
ಪವರ್ ಬಾಕ್ಸ್ಗೆ ಹಾನಿಯಾದ ಪರಿಣಾಮ ಒಂದು ತಾಸು ರೈಲು ಸಂಚಾರ ಸ್ಥಗಿತ ಗೊಂಡಿತ್ತು. ಸ್ಥಳಕ್ಕೆ ಆಗಮಿಸಿದ ರೈಲ್ವೆ ಇಲಾಖೆ ತಂತಜ್ಞರು ಪವರ್ ಬಾಕ್ಸ್ ದುರಸ್ತಿಗೊಳಿಸಿದ ಬಳಿಕ ರೈಲು ಬೆಂಗಳೂರಿನ ಕಡೆ ಪ್ರಯಾಣ ಬೆಳೆಸಿತು.