ಸೈಕಲ್‌'ನಲ್ಲಿ ಬಂದ ಶರ್ಮಾರ ಬಗ್ಗೆ ಅಖಿಲೇಶ್‌ ಸಂತಸ ವ್ಯಕ್ತಪಡಿಸಿದ್ದಾರೆ. ರಿಕ್ಷಾ ಚಾಲಕನಿಗೆ ದೀಪಾವಳಿ ಕೊಡುಗೆಯಾಗಿ 6 ಸಾವಿರ ರೂ. ನೀಡಿದ್ದಾರೆ.
ಲಖನೌ: ಸಾಮಾನ್ಯವಾಗಿ ಕಂಪನಿಗಳ ಮುಖ್ಯಸ್ಥರು ಅಥವಾ ಶ್ರೀಮಂತರೆಂದರೆ ಐಶಾರಾಮಿ ಕಾರುಗಳಲ್ಲೇ ಓಡಾಡುತ್ತಾರೆ ಎಂಬ ಕಲ್ಪನೆ ನಮ್ಮದು, ಅದು ಸತ್ಯವೂ ಹೌದು. ಆದರೆ, ಪ್ರಮುಖ ಅಂತರ್ಜಾಲ ಮಾರಾಟ ಸಂಸ್ಥೆ ‘ಪೇಟಿಎಂ' ಮುಖ್ಯಸ್ಥ ವಿಜಯ್ ಶೇಖರ್ ಅವರು ಉತ್ತರಪ್ರದೇಶ ಸಿಎಂ ಅಖಿಲೇಶ್ ಯಾದವ್ರನ್ನು ಭೇಟಿ ಮಾಡಲು ಸೈಕಲ್ ರಿಕ್ಷಾದಲ್ಲಿ ಬಂದಿದ್ದಾರೆ.
‘ಯಶ್ ಭಾರ್ತಿ' ಪ್ರಶಸ್ತಿ ಸ್ವೀಕರಿಸಲು ಲಖನೌಗೆ ಬಂದಿದ್ದ ಶರ್ಮಾ ಅವರು ಅಖಿಲೇಶ್'ರನ್ನು ಭೇಟಿ ಮಾಡಲು ಹೊರಟಿದ್ದರು. ಅರ್ಧದಲ್ಲೇ ಲಖನೌನ ಸಂಚಾರದಟ್ಟಣೆಯಲ್ಲಿ ಅವರ ಕಾರು ಸಿಲುಕಿಕೊಂಡಿತು. ಕೂಡಲೇ ಅವರು ಕಾರಿನಿಂದ ಇಳಿದು, ಅಲ್ಲೇ ಇದ್ದ ಸೈಕಲ್ ರಿಕ್ಷಾವನ್ನು ಏರಿದರು.
ಕಾಳಿದಾಸ ಮಾರ್ಗದಲ್ಲಿರುವ ಅಖಿಲೇಶ್ ಅವರ ನಿವಾಸಕ್ಕೆ ಬಂದೊಡನೆ, ಶರ್ಮಾ ಹಾಗೂ ರಿಕ್ಷಾ ಚಾಲಕನನ್ನು ಸಂಪೂರ್ಣ ಭದ್ರತಾ ಪರೀಕ್ಷೆ ನಡೆಸಿ ಪ್ರವೇಶ ನೀಡಲಾಯಿತು.
ಸೈಕಲ್'ನಲ್ಲಿ ಬಂದ ಶರ್ಮಾರ ಬಗ್ಗೆ ಅಖಿಲೇಶ್ ಸಂತಸ ವ್ಯಕ್ತಪಡಿಸಿದ್ದಾರೆ. ರಿಕ್ಷಾ ಚಾಲಕನಿಗೆ ದೀಪಾವಳಿ ಕೊಡುಗೆಯಾಗಿ 6 ಸಾವಿರ ರೂ. ನೀಡಿದ್ದಾರೆ. ಅಷ್ಟೇ ಅಲ್ಲ, ಚಾಲಕನಿಗೆ ಮನೆ, ಇ-ರಿಕ್ಷಾ ಹಾಗೂ ಆತನ ಪತ್ನಿಗೆ ಸಮಾಜವಾದಿ ಪಿಂಚಣಿ ಯೋಜನೆಯ ಲಾಭವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ಶರ್ಮಾ ಸೈಕಲ್ ರಿಕ್ಷಾದಲ್ಲಿ ಬಂದ ಫೋಟೋವನ್ನು ಅಖಿಲೇಶ್ ಟ್ಟಿಟರ್'ನಲ್ಲಿ ಅಪ್ಲೋಡ್ ಮಾಡಿದ್ದಾರೆ.
