ಕಟೀಲ್ ನೇಮಕ: ಬಿಜೆಪಿ ಸಂಘಟನೆ ಸಂತೋಷ್ ತೆಕ್ಕೆಗೆ!| ಕಟೀಲ್ ಅವರು ಸಂತೋಷ್ ಅವರ ಅತ್ಯಾಪ್ತರು ಎನ್ನುವುದು ಜಗಜ್ಜಾಹೀರಾಗಿರುವ ಸಂಗತಿ

ಬೆಂಗಳೂರು[ಆ.21]: ಸಂಸದ ನಳಿನ್ ಕುಮಾರ್ ಕಟೀಲ್ ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡ ಬೆನ್ನಲ್ಲೇ ರಾಜ್ಯ ಸರ್ಕಾರ ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ ಅವರ ಕೈಗೆ ಮತ್ತು ಪಕ್ಷದ ಸಂಘಟನೆ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ತೆಕ್ಕೆಗೆ ಹೋದಂತಾಗಿದೆ.

Add Asianetnews Kannada as a Preferred SourcegooglePreferred

ಮುಖ್ಯಮಂತ್ರಿಯನ್ನಾಗಿ ಯಡಿಯೂರಪ್ಪ ರನ್ನು ನೇಮಕ ಮಾಡುವ ಮೊದಲೇ ಹೈಕಮಾಂಡ್ ಮಟ್ಟದಲ್ಲಿ ಚರ್ಚೆ ನಡೆದಿತ್ತು. ನಿಮ್ಮನ್ನು ಮುಖ್ಯಮಂತ್ರಿಯನ್ನಾಗಿ ಮಾಡುತ್ತೇವೆ. ರಾಜ್ಯಾಧ್ಯಕ್ಷರನ್ನು ನಮಗೆ ಬೇಕಾದವರನ್ನು ಮಾಡುತ್ತೇವೆ ಎಂಬ ಮಾತನ್ನು ವರಿಷ್ಠರು ಬಿಎಸ್‌ವೈ ಗಮನಕ್ಕೆ ತಂದಿದ್ದರು ಎನ್ನಲಾಗಿದೆ

ಆದರೂ ಯಡಿಯೂರಪ್ಪ ಅವರು ಅರವಿಂದ್ ಲಿಂಬಾವಳಿ ಅವರನ್ನು ರಾಜ್ಯಾಧ್ಯಕ್ಷ ಹುದ್ದೆಗೆ ಪ್ರಸ್ತಾಪ ಮಾಡಿದ್ದರು. ಸಂಸದರೇ ಆಗಬೇಕಾದಲ್ಲಿ ಶೋಭಾ ಕರಂದ್ಲಾಜೆ ಅಥವಾ ಪಿ.ಸಿ.ಮೋಹನ್ ಪೈಕಿ ಒಬ್ಬರನ್ನು ಪರಿಗಣಿಸಿ ಎಂಬ ಸಲಹೆಯನ್ನೂ ನೀಡಿದ್ದರು. ಆದರೆ, ಪಕ್ಷದ ಹೈಕಮಾಂಡ್ ಈ ವಿಷಯದಲ್ಲಿ ಹಿಂದೆ ಸರಿಯಲಿಲ್ಲ. ಸಂಪುಟ ರಚನೆ ವೇಳೆ ಯಡಿಯೂರಪ್ಪ ಅವರು ಮುಂದಿಟ್ಟ ಕೆಲವು ಆಪ್ತ ಶಾಸಕರನ್ನು ಸಚಿವರನ್ನಾಗಿಸಲು ಸಹಮತ ಸೂಚಿಸಿದ ಬೆನ್ನಲ್ಲೇ ವರಿಷ್ಠರು ರಾಜ್ಯಾಧ್ಯಕ್ಷ ಹುದ್ದೆಗೆ ನಳಿನ್‌ಕುಮಾರ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದರು. ಕಟೀಲ್ ಅವರು ಸಂತೋಷ್ ಅವರ ಅತ್ಯಾಪ್ತರು ಎನ್ನುವುದು ಜಗಜ್ಜಾಹೀರಾಗಿರುವ ಸಂಗತಿ. ಈ ಮೂಲಕ ಇದೀಗ ಪಕ್ಷ ಸಂತೋಷ್ ಅವರ ತೆಕ್ಕೆಗೆ ಬಂದಂತಾಗಿದೆ.