ಹತಾಶ ಪಾಕ್ನಿಂದ ಬಸ್ ಸೇವೆಗೂ ಕೊಕ್!
ಹತಾಶ ಪಾಕ್ನಿಂದ ಬಸ್ ಸೇವೆಗೂ ಕೊಕ್| ಸಂಝೋತಾ ಎಕ್ಸ್ಪ್ರೆಸ್ ರದ್ದು ಬಳಿಕ ಹೊಸ ಘೋಷಣೆ| ದೆಹಲಿ-ಲಾಹೋರ್ ನಡುವಿನ ಬಸ್ ಸಂಚಾರ ಸ್ಥಗಿತ
ಇಸ್ಲಮಾಬಾದ್[ಆ.11]: ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ತೆಗೆದುಹಾಕಿದ ಬಳಿಕ ಹತಾಶೆಯಿಂದ ಚಡಪಡಿಸುತ್ತಿರುವ ಪಾಕಿಸ್ತಾನ, ದೆಹಲಿ ಹಾಗೂ ಲಾಹೋರ್ ನಡುವೆ ಸಂಚಾರಕ್ಕೆ ಇರುವ ಸೌಹಾರ್ಧ ಬಸ್ ಸೇವೆಯನ್ನೂ ಸ್ಥಗಿತಗೊಳಿಸಿದೆ. ಸೋಮವಾರದದಿಂದ ದೆಹಲಿ ಹಾಗೂ ಲಾಹೋರ್ ನಡುವಣ ಬಸ್ ಸೇವೆ ರದ್ದಾಗಲಿದೆ ಎಂದು ಪಾಕ್ ದೂರಸಂಪರ್ಕ ಖಾತೆ ಸಚಿವ ಮುರಾದ್ ಸಯೀದ್ ಈ ಘೋಷಣೆ ಮಾಡಿದ್ದಾರೆ.
ಎರಡು ಪ್ರಯಾಣಿಕರಿದ್ದ ಪಾಕಿಸ್ತಾನ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಬಸ್ ಬೆಳಗ್ಗೆ 6 ಗಂಟೆಗೆ ದೆಹಲಿಯ ಅಂಬೇಡ್ಕರ್ ಸ್ಟೇಡಿಯಂ ಬಸ್ ನಿಲ್ದಾಣದಿಂದ ಹೊರಟಿದ್ದು, ಮೂರು ಪ್ರಯಾಣಿಕರನ್ನು ಹೊತ್ತು ದೆಹಲಿ ಸಾರಿಗೆ ನಿಗಮದ ಬಸ್ ಅದೇ ವೇಳೆಗೆ ಲಾಹೋರ್ ನಿಂದ ದೆಹಲಿಗೆ ಹೊರಟಿದೆ. 1999 ರಲ್ಲಿ ಆಟಲ್ ಬಿಹಾರಿ ವಾಜಪೇಯಿ ಹಾಗೂ ನವಾಜ್ ಶರೀಫ್ ಶಾಂತಿ ಒಪ್ಪಂದದ ಫಲವಾಗಿ ದೆಹಲಿ -ಲಾಹೋರ್ ಮಧ್ಯೆ ಬಸ್ ಸಂಚಾರ ಆರಂಭವಾಗಿತ್ತು.
2001 ರ ಸಂಸತ್ ದಾಳಿ ಬಳಿಕ ಸ್ಥಗಿತವಾಗಿದ್ದ ಈ ಸೇವೆಯನ್ನು ಮತ್ತೆ 2003 ಜುಲೈನಲ್ಲಿ ಪುನರಾರಂಭಿಸಲಾಗಿತ್ತು. ಪುಲ್ವಾಮ ದಾಳಿ ಸಂದರ್ಭ ಎರಡೂ ರಾಷ್ಟ್ರಗಳ ನಡುವಿನ ಸಂಬಂಧ ವಿಷಮವಾಗಿದ್ದರೂ ಬಸ್ ಸೇವೆಗೆ ಯಾವುದೇ ತೊಂದರೆ ಉಂಟಾಗಿರಲಿಲ್ಲ. ವಾರದ ಏಳೂ ದಿನವೂ ಈ ಬಸ್ ದೆಹಲಿ ಹಾಗೂ ಲಾಹೋರ್ ಮಧ್ಯೆ ಚಲಿಸುತ್ತಿತ್ತು.
ಈ ಮಧ್ಯೆ ರಾಜಸ್ಥಾನ ಗಡಿ ಮೂಲಕ ಜೋಧ್ಪುರದಿಂದ- ಕರಾಚಿಗೆ ತೆರಳುವ ಥಾರ್ ಎಕ್ಸ್ಪ್ರೆಸ್ ರೈಲು ಸೇವೆಯನ್ನೂ ಸ್ಥಗಿತಗೊಳಿಸಲಾಗಿದ್ದು, ಶ್ರುಕ್ರವಾರ ರಾತ್ರಿ ಕರಾಚಿಯಿಂದ ಕೊನೆಯ ರೈಲು ಹೋಗಿದೆ ಎಂದು ಪಾಕ್ ಸಚಿವ ತಿಳಿಸಿದ್ದಾರೆ.
133 ಕಿ.ಮಿ ಉದ್ದದ ಈ ಹಳಿಯನ್ನು 13 ಬಿಲಿಯನ್ ರು. ಖರ್ಚಿನಲ್ಲಿ ನಿರ್ಮಾಣ ಮಾಡಲಾಗಿದ್ದು, ಇನ್ನು ಮುಂದೆ ಅದನ್ನು ಥಾರ್ ಕಲ್ಲಿದ್ದಲು ಯೋಜನೆಗೆ ಬಳಸಲಾಗ್ತುತದೆ ಎಂದು ರಶೀದ್ ಹೇಳಿದ್ದಾರೆ. ಜೋಧ್ಪುರದ ಭಗತ್ ಕೀ ಕೋಥಿ ರೈಲು ನಿಲ್ದಾಣದಿಂದ ಕರಾಚಿಗೆ ಪ್ರತೀ ಶುಕ್ರವಾರ ಚಲಿಸುವ ರೈಲು 41 ವರ್ಷಗಳ ರದ್ದಿನ ಬಳಿಕ 2006 ಫೆ. 18 ರಂದು ಪುನರಾರಂಭಗೊಂಡಿತ್ತು. ಇದೇ ಬುಧವಾರದಂದು ದೆಹಲಿ-ಲಾಹೋರ್ ಮಧ್ಯೆ ಅಟ್ಟಾರಿ-ವಾಘಾ ಗಡಿ ಮೂಲಕ ಓಡುವ ಸಂಝೋತಾ ಎಕ್ಸ್ಪ್ರೆಸ್ ರೈಲನ್ನು ಸ್ಥಗಿತಗೊಳಿಸಿ ಪಾಕಿಸ್ತಾನ ಅದೇಶ ಹೊರಡಿಸಿತ್ತು. ಮಾತ್ರವಲ್ಲ ಭಾರತದೊಂದಿಗಿನ ದ್ವಿಪಕ್ಷೀಯ ಒಪ್ಪಂದಗಳನ್ನೂ ಮುರಿದುಕೊಂಡಿದ್ದ ಪಾಕ್ ಬಸ್ಸು ಸಂಚಾರ ರದ್ದು ಮಾಡುವ ಮೂಲಕ ತನ್ನ ಸೇಡಿನ ನಿಲುವು ಮುಂದುವರಿಸಿದೆ.