ಬಿಎಸ್ಎಫ್ನ ಹೆಡ್ ಕಾನ್ಸ್ಟೇಬಲ್ ನರೇಂದ್ರ ಸಿಂಗ್ ಮಂಗಳವಾರ ಅಂತಾರಾಷ್ಟ್ರೀಯ ಗಡಿ ರೇಖೆಯ ಬಳಿ ಇರುವ ಬೇಲಿಯ ಬಳಿ ಬೆಳೆದಿದ್ದ ಹುಲ್ಲು ಕತ್ತರಿಸಲು ಹೋಗಿದ್ದರು. ಈ ವೇಳೆ ಪಾಕ್ ಪಡೆಗಳು ಏಕಾಏಕಿ ದಾಳಿ ನಡೆಸಿದ್ದವು. ಅಲ್ಲದೇ ಯೋಧನನ್ನು ಭೀಕರವಾಗಿ ಗುಂಡಿಟ್ಟು ಹತ್ಯೆಗೈದಿರುವ ಪಾಕ್ ಸೈನಿಕರು, ಬಳಿಕ ಆತನ ಕತ್ತನ್ನು ಸೀಳಿದ್ದಲ್ಲದೇ, ಕಣ್ಣುಗುಡ್ಡೆಯನ್ನು ಕೀಳುವ ಮೂಲಕ ಅತ್ಯಂತ ಹೇಯವಾಗಿ ವರ್ತಿಸಿದ್ದಾರೆ.
ಜಮ್ಮು/ನವದೆಹಲಿ: ಪಾತಕೀ ಕೃತ್ಯಗಳಿಗೆ ಕುಖ್ಯಾತಿ ಹೊಂದಿರುವ ಪಾಕಿಸ್ತಾನ ಸೇನೆ ಮತ್ತೊಮ್ಮೆ ತನ್ನ ಕರಾಳಮುಖವನ್ನು ಹೊರಹಾಕಿದೆ. ಜಮ್ಮು ಮತ್ತು ಕಾಶ್ಮೀರದ ರಾಮ್ಗಢ್ ಬಳಿ ಭಾರತೀಯ ಯೋಧನನ್ನು ಭೀಕರವಾಗಿ ಗುಂಡಿಟ್ಟು ಹತ್ಯೆಗೈದಿರುವ ಪಾಕ್ ಸೈನಿಕರು, ಬಳಿಕ ಆತನ ಕತ್ತನ್ನು ಸೀಳಿದ್ದಲ್ಲದೇ, ಕಣ್ಣುಗುಡ್ಡೆಯನ್ನು ಕೀಳುವ ಮೂಲಕ ಅತ್ಯಂತ ಹೇಯವಾಗಿ ವರ್ತಿಸಿದ್ದಾರೆ.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಭಾರತೀಯ ಗಡಿ ಭದ್ರತಾ ಪಡೆ (ಬಿಎಸ್ಎಫ್), ಪಾಕ್ ಸೇನೆಗೆ ತನ್ನ ತೀವ್ರ ಪ್ರತಿಭಟನೆಯನ್ನು ಸಲ್ಲಿಸಿದೆ. ಜೊತೆಗೆ ಘಟನೆ ಕುರಿತು ಭಾರತದ ವಿದೇಶಾಂಗ ಸಚಿವಾಲಯ ಮತ್ತು ಮಿಲಿಟರಿ ಕಾರ್ಯಾಚರಣೆ ಕುರಿತ ಪ್ರಧಾನ ನಿರ್ದೇಶಕರು ಕೂಡಾ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ಏನಾಗಿತ್ತು?: ಬಿಎಸ್ಎಫ್ನ ಹೆಡ್ ಕಾನ್ಸ್ಟೇಬಲ್ ನರೇಂದ್ರ ಸಿಂಗ್ ಮಂಗಳವಾರ ಅಂತಾರಾಷ್ಟ್ರೀಯ ಗಡಿ ರೇಖೆಯ ಬಳಿ ಇರುವ ಬೇಲಿಯ ಬಳಿ ಬೆಳೆದಿದ್ದ ಹುಲ್ಲು ಕತ್ತರಿಸಲು ಹೋಗಿದ್ದರು. ಈ ವೇಳೆ ಪಾಕ್ ಪಡೆಗಳು ಏಕಾಏಕಿ ದಾಳಿ ನಡೆಸಿದ್ದವು. ಈ ವೇಳೆ ಭಾರತೀಯ ಸೇನೆ ಕೂಡಾ ಪ್ರತಿದಾಳಿ ನಡೆಸಿ ಮರಳಿತ್ತು. ಈ ನಡುವೆ ನರೇಂದ್ರ ಸಿಂಗ್ ನಾಪತ್ತೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಅವರ ಪತ್ತೆಗೆ ಜಂಟಿ ಕಾರ್ಯಾಚರಣೆ ನಡೆಸುವ ಪ್ರಸ್ತಾಪವನ್ನು ಹಲವು ಬಾರಿ ಬಿಎಸ್ಎಫ್, ಪಾಕ್ ರೇಂಜರ್ಸ್ ಮುಂದಿಟ್ಟಿತ್ತು. ಆದರೆ ಹಲವು ಬಾರಿ ಈ ಬಗ್ಗೆ ಕರೆ ಮಾಡಿದಾಗಲೂ, ಪಾಕ್ ರೇಂಜರ್ಸ್ ಕಡೆಯಿಂದ ಪ್ರತಿಕ್ರಿಯೆಯೇ ವ್ಯಕ್ತವಾಗಿರಲಿಲ್ಲ. ಪತ್ತೆ ಕಾರ್ಯಕ್ಕೆ ತೆರಳಿದ ವೇಳೆ ಯಾವುದೇ ದಾಳಿ ತಡೆಯುವ ನಿಟ್ಟಿನಲ್ಲಿ ಇಂಥ ಜಂಟಿ ಕಾರ್ಯಾಚರಣೆ ನಡೆಸಲಾಗುತ್ತದೆ.
ಆದರೆ ಪಾಕ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಮಂಗಳವಾರ ಸೂರ್ಯ ಮುಳುಗಿದ ವೇಳೆ ಭಾರತೀಯ ಯೋಧರು, ಅಂತಾರಾಷ್ಟ್ರೀಯ ಗಡಿ ರೇಖೆ ಬಳಿ ಅತ್ಯಂತ ಅಪಾಯಕಾರಿ ಸನ್ನಿವೇಶದಲ್ಲಿ ಹುಡುಕಾಟ ಆರಂಭಿಸಿದ್ದರು. ಕೆಲ ಹೊತ್ತಿನ ಬಳಿಕ ಗುಂಡೇಟು ತಿಂದು ಸಾವನ್ನಪ್ಪಿದ ಸ್ಥಿತಿಯಲ್ಲಿ ನರೇಂದ್ರ ಸಿಂಗ್ ಶವ ಪತ್ತೆಯಾಗಿದೆ. ಸೂಕ್ಷ್ಮ ಪರಿಶೀಲನೆ ವೇಳೆ ಸ್ನಿಪ್ಪರ್ ದಾಳಿಯಿಂದ ನರೇಂದ್ರ ಸಿಂಗ್ ಸಾವನ್ನಪ್ಪಿದ್ದು ಕಂಡುಬಂದಿತ್ತು. ಬಳಿಕ ಅವರ ಕತ್ತು ಸೀಳಿ, ಕಣ್ಣುಗುಡ್ಡೆಯನ್ನು ಸಹ ಕಿತ್ತುಹಾಕಿರುವುದು ಪತ್ತೆಯಾಗಿದೆ.
