ಐಟಿ ಭಯದಿಂದ ರಮೇಶ್‌ ಮೈತ್ರಿ ಸರ್ಕಾರ ಬೀಳಿಸಿದ್ದಾರೆ: ಸತೀಶ್‌| ಬಿಜೆಪಿ ಸೇರಿಲ್ಲವೆಂದು ಡಿಕೆಶಿ ಮೇಲೆ ದ್ವೇಷದ ರಾಜಕಾರಣ

ಬೆಳಗಾವಿ[ಸೆ.14]: ಗೋಕಾಕ್‌ ಅನರ್ಹ ಶಾಸಕ ರಮೇಶ್‌ ಜಾರಕಿಹೊಳಿ ಮನೆ ಮೇಲೆ ಐಟಿ ದಾಳಿಯಾಗಿತ್ತು. ಹೀಗಾಗಿ ಐಟಿ ತನಿಖೆ ಭಯದಿಂದ ರಮೇಶ್‌ ಮೈತ್ರಿ ಸರ್ಕಾರ ಪತನಗೊಳಿಸಿ, ಬಿಜೆಪಿ ಪರ ಬ್ಯಾಟ್‌ ಬೀಸುತ್ತಿದ್ದಾರೆ ಎಂದು ಮಾಜಿ ಸಚಿವ, ಯಮಕನಮರಡಿ ಶಾಸಕ ಸತೀಶ್‌ ಜಾರಕಿಹೊಳಿ ಆರೋಪಿಸಿದ್ದಾರೆ.

Add Asianetnews Kannada as a Preferred SourcegooglePreferred

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್‌ ಅವರಿಗಿಂತಲೂ ದೊಡ್ಡವರು ಬಿಜೆಪಿಯಲ್ಲಿದ್ದಾರೆ. ಎಷ್ಟೋ ಜನ ಕಾಂಗ್ರೆಸ್‌ ನಾಯಕರ ಮೇಲೆ ಪ್ರಕರಣಗಳಿದ್ದವು. ಅವರು ಬಿಜೆಪಿ ಸೇರ್ಪಡೆಯಾದ ಬಳಿಕ ಅವರ ಪ್ರಕರಣಗಳೆಲ್ಲವೂ ಇತ್ಯರ್ಥವಾಗಿವೆ ಎಂದು ಆರೋಪಿಸಿದರು.

ಈ ಹಿಂದೆ ಶಿವಕುಮಾರ್‌ ಅವರಿಗೆ ಬಿಜೆಪಿ ಸೇರಬೇಕೆಂಬ ಆಫರ್‌ ಬಂದಿತ್ತು. ಆದರೆ, ಅವರು ನಿರಾಕರಿಸಿದ್ದರಿಂದ ಅವರನ್ನು ರಾಜಕೀಯವಾಗಿ ಕಟ್ಟಿಹಾಕಿದ್ದಾರೆ. ಶಿವಕುಮಾರ್‌ ಅವರನ್ನು ಉದ್ದೇಶಪೂರ್ವಕವಾಗಿಯೇ ಗುರಿಯಾಗಿಸಲಾಗಿದೆ. ಬಿಜೆಪಿ ದ್ವೇಷದ ರಾಜಕೀಯ ಮಾಡುತ್ತಿದೆ ಎಂದು ದೂರಿದರು.

ಕಾರ್ಯಕರ್ತರ ಬಂಧನ, ಎಸ್‌ಪಿಗೆ ಪತ್ರ:

ಅನಾವಶ್ಯಕವಾಗಿ ಪೊಲೀಸರು ಗೋಕಾಕ್‌ ತಾಲೂಕಿನಲ್ಲಿ ಕಾಂಗ್ರೆಸ್‌ ಕಾರ್ಯಕರ್ತರನ್ನು ಬಂಧಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಪತ್ರ ಬರೆದು ಗಮನ ಸೆಳೆದಿದ್ದೇನೆ. ಕಾಂಗ್ರೆಸ್‌ ಕಾರ್ಯಕರ್ತರನ್ನು ಗುರಿಯಾಗಿಸಿ ರಾಜಕೀಯ ಮಾಡಲಾಗುತ್ತಿದೆ. ಇಂತಹ ಘಟನೆಗಳು ಮರುಕ​ಳಿ​ಸಬಾರದು ಎಂಬ ಉದ್ದೇಶದಿಂದ ಎಸ್ಪಿಗೆ ಪತ್ರ ಬರೆದಿದ್ದೇನೆ ಎಂದರು.

ಕ್ಷೇತ್ರ​ದಲ್ಲಿ ಜನರ ಮೇಲೆ ರಮೇಶ್‌ ಜಾರಕಿಹೊಳಿ ಗುಲಾಮಗಿರಿ ನಡೆಸಿದ್ದು, ಗುಲಾಮಗಿರಿಯಿಂದ ಜನ​ರಿಗೆ ಮುಕ್ತಿ ಕೊಡಿಸಲು ಹೋರಾಟ ಮಾಡುತ್ತೇವೆ. ರಮೇಶ್‌ ಅವರ ಅಳಿಯ ಅಂಬಿರಾವ್‌ಗೆ ನಮ್ಮ ಬಗ್ಗೆ ಯಾವುದೇ ಭಯ ಇಲ್ಲ ಎಂದು ಹೇಳಿದರು.