Asianet Suvarna News Asianet Suvarna News

ಒಂದು ಸಾವಿರ ರೈತರು ಕಂಪನಿ ತೆರೆದರು; ಇದು ಪಿಂಗಾರ ಕಂಪನಿ ಹುಟ್ಟಿದ ಕಥೆ

ರೈತರು ಬಹುತೇಕ ನಷ್ಟ ಅನುಭವಿಸುವುದು ಮಧ್ಯವರ್ತಿಗಳ ಅತಿಯಾದ ಹಾವಳಿಯಿಂದ. ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಕ್ಕದೇ ಕೃಷಿಯೇ ಒಂದು ನಷ್ಟದಾಯಕ ಉದ್ಯಮ ಎಂದು ಕೂರುವ ವೇಳೆಯಲ್ಲಿಯೇ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ ಪ್ರಗತಿಪರ ಕೃಷಿಕರ ತಂಡವೊಂದು ಒಟ್ಟಾಗಿ ಸೇರಿಕೊಂಡು ತೋಟಗಾರಿಕೆ ಇಲಾಖೆಯ ಸಹಕಾರದೊಂದಿಗೆ ‘ಪಿಂಗಾರ’ ಎನ್ನುವ ಕಂಪನಿಯನ್ನು ಪ್ರಾರಂಭಿಸಿ ಪ್ರಾರಂಭಿಕ ಹಂತದಲ್ಲಿ ಹಲಸಿನ ಹಣ್ಣಿನ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಿ ಬಂದ ಲಾಭವನ್ನು ತಮ್ಮ ನಡುವಲ್ಲೇ ಹಂಚಿಕೊಳ್ಳುತ್ತಿದೆ.

One Thousand Former's Starts Pinagara Company

ಬೆಂಗಳೂರು(ಜೂ.15]: ರೈತರು ಬಹುತೇಕ ನಷ್ಟ ಅನುಭವಿಸುವುದು ಮಧ್ಯವರ್ತಿಗಳ ಅತಿಯಾದ ಹಾವಳಿಯಿಂದ. ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಕ್ಕದೇ ಕೃಷಿಯೇ ಒಂದು ನಷ್ಟದಾಯಕ ಉದ್ಯಮ ಎಂದು ಕೂರುವ ವೇಳೆಯಲ್ಲಿಯೇ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ ಪ್ರಗತಿಪರ ಕೃಷಿಕರ ತಂಡವೊಂದು ಒಟ್ಟಾಗಿ ಸೇರಿಕೊಂಡು ತೋಟಗಾರಿಕೆ ಇಲಾಖೆಯ ಸಹಕಾರದೊಂದಿಗೆ ‘ಪಿಂಗಾರ’ ಎನ್ನುವ ಕಂಪನಿಯನ್ನು ಪ್ರಾರಂಭಿಸಿ ಪ್ರಾರಂಭಿಕ ಹಂತದಲ್ಲಿ ಹಲಸಿನ ಹಣ್ಣಿನ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಿ ಬಂದ ಲಾಭವನ್ನು ತಮ್ಮ ನಡುವಲ್ಲೇ ಹಂಚಿಕೊಳ್ಳುತ್ತಿದೆ. ಕೃಷಿ ಎನ್ನುವುದು ಬುದ್ದಿವಂತಿಕೆಯಿಂದ ಮಾಡಿದರೆ ಲಾಭದಾಯಕ ವೃತ್ತಿ ಎನ್ನುವುದನ್ನು ತೋರಿಸಿಕೊಟ್ಟಿದೆ.

ಇದು ರೈತರಿಂದ, ರೈತರಿಗೋಸ್ಕರ, ರೈತರಿಂದಲೇ ನಡೆಯುವ ಕಂಪನಿ. ಇಲ್ಲಿ ಮಧ್ಯವರ್ತಿಗಳ ಕಾಟವಿಲ್ಲ. ತೋಟಗಾರಿಕಾ ಇಲಾಖೆಯ ಸಹಭಾಗಿತ್ವದಲ್ಲಿ ರೈತರಿಂದಲೇ ನಡೆಯುವ ಈ ಕಂಪನಿ ತಯಾರಿಸುವ ಹಲಸಿನ ಉತ್ಪನ್ನಗಳಾದ ಹಪ್ಪಳ, ಚಿಪ್ಸ್, ಹಲ್ವಾ, ಮಾಂಬಳ ಈಗ ಹಳ್ಳಿಯಿಂದ ರಾಜಧಾನಿವರೆಗೆ ತಲುಪಿವೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದ ‘ಪಿಂಗಾರ’ ಕೃಷಿಕರಿಂದಲೇ ಯಶಸ್ವಿಯಾಗಿ ನಡೆಯುತ್ತಿರುವ ರಾಜ್ಯದ ಏಕೈಕ ಕಂಪನಿ. ರೈತರೇ ನೇರವಾಗಿ ಜವಾಬ್ದಾರಿ ವಹಿಸಿಕೊಂಡರೆ ತಮ್ಮ ಉತ್ಪನ್ನಗಳಿಗೆ ಹೇಗೆ ಮೌಲ್ಯವರ್ಧನೆ ಮಾಡಬಹುದು ಎಂದು ರಾಜ್ಯಕ್ಕೇ ಮಾದರಿಯಾಗಿ ಈ ಪಿಂಗಾರ ಕಂಪನಿ. 

ಆರಂಭ ಹೇಗೆ? 

ಹಲಸಿನ ಮೌಲ್ಯವರ್ಧನೆ ಕುರಿತು ದಶಕಗಳ ಹಿಂದೆ ಜಿಲ್ಲೆಯಲ್ಲಿ ಆರಂಭಗೊಂಡ ಅಭಿಯಾನವೇ ಪಿಂಗಾರ ಕಂಪನಿ ಜನ್ಮತಾಳಲು ಮೂಲ ಕಾರಣ. ಅಡಕೆ, ತೆಂಗು, ಕಾಳುಮೆಣಿಸಿನ ಕುರಿತು ಸಾಕಷ್ಟು ಪ್ರಯೋಗ, ಮೌಲ್ಯವರ್ಧನೆಯಾಗುತ್ತಿದೆ. ಇವುಗಳನ್ನು ಹೊರತುಪಡಿಸಿ ಬೇರೆ ಏನಾದರೂ ಮಾಡುವ ಯೋಚನೆ ಕಂಪನಿ ಸದಸ್ಯರಿಗೆ ಬಂತು. ಆ ಸಮಯದಲ್ಲೇ ಪತ್ರಿಕೆಯೊಂದರಲ್ಲಿ ಹಲಸು ಬೆಳೆಗಾರರ ಯಶೋಗಾಥೆಗಳ ಸರಣಿ ಲೇಖನ ಪ್ರಕಟವಾಗಿ ಕಂಪನಿ ಸದಸ್ಯರು ಈ ನಿಟ್ಟಿನಲ್ಲಿ ಪೂರ್ವ ತಯಾರಿಗಳನ್ನು ಮಾಡಿಕೊಂಡು ತೋಡಿನಲ್ಲಿ ಬಿದ್ದು ಹಾಳಾಗುವ ಹಲಸಿಗೆ ಮೌಲ್ಯ ಕಲ್ಪಿಸುವ ಉದ್ದೇಶದಿಂದ ಹಲಸಿನ ಮಾರುಕಟ್ಟೆಯನ್ನು ಪ್ರವೇಶಿಸಿದರು. 

ಏನೆಲ್ಲಾ ಉತ್ಪನ್ನಗಳಿವೆ ಕಂಪನಿ ವತಿಯಿಂದ ಈಗ ಪ್ರಾರಂಭಿಕ ಹಂತದಲ್ಲಿ ಪ್ರತಿದಿನ 1500 ಹಪ್ಪಳ, ವಾರಕ್ಕೆ 25 ಕೆಜಿ ಹಲ್ವಾ, 8-10 ಕೆಜಿ ಚಿಪ್ಸ್, 5 ಕೆಜಿ ಮಾಂಬಳ ಉತ್ಪಾದನೆ ಮಾಡಲಾಗುತ್ತಿದೆ. ಇವುಗಳನ್ನು ಉತ್ಪಾದಿಸಲು ಬೇಕಾಗುವ ಯಂತ್ರಗಳಿಗೆ ತೋಟಗಾರಿಕಾ ಇಲಾಖೆ ಸಹಾಯಧನ ನೀಡಿದೆ. ಉತ್ಪಾದಿಸಿದ ಉತ್ಪನ್ನಗಳನ್ನು ಸದ್ಯಕ್ಕೆ ಸ್ಥಳೀಯ ಮಾರುಕಟ್ಟೆ ಹಾಗೂ ಬೆಂಗಳೂರು, ಮಂಗಳೂರು ಸ್ಟೋರ್‌ಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ರೈತರಿಂದಗೆ ಕೆಜಿ ಒಂದಕ್ಕೆ 2 ರುಪಾಯಿಯಂತೇ ಹಲಸನ್ನು ಖರೀದಿಸಿ ತರಲಾಗುತ್ತಿದೆ. ರೈತರೇ ನೇರವಾಗಿ ಕಂಪನಿಗೆ ಹಲಸು ತಂದು ಕೊಟ್ಟರೆ ಪ್ರತಿ ಕೆಜಿಗೆ 4 ರುಪಾಯಿ ನೀಡಿ ಖರೀದಿಸಲಾಗುತ್ತಿದೆ. ರೈತರಿಂದ ಖರೀದಿಸಿದ ಹಲಸನ್ನು ಮೌಲ್ಯವರ್ಧನೆ ಮಾಡಿ ಮಾರಾಟ ಮಾಡಲಾಗುತ್ತಿದೆ. ಯಾವುದೇ ಮಧ್ಯವರ್ತಿಗಳಿಲ್ಲದೇ ನೇರವಾಗಿ ರೈತರು ಮತ್ತು ಕಂಪನಿ ನಡುವೆ ವ್ಯವಹಾರವಾಗುತ್ತಿದೆ. 

ಇತರ ಚಟುವಟಿಕೆಗಳು: 

ಹಲಸು ಕೇವಲ ವರ್ಷದ 4 ತಿಂಗಳು ಮಾತ್ರ ಸಿಗುವ ಉತ್ಪನ್ನ. ಉಳಿದ ಸಮಯದಲ್ಲಿ ಬಾಳೆಕಾಯಿ ಚಿಪ್ಸ್ ಹಾಗೂ ಬಾಳೆ ಹಣ್ಣು ಹಲ್ವಗಳನ್ನು ಕಂಪನಿ ಮೂಲಕ ಮಾಡಲಾಗುತ್ತಿದೆ. ಉಳಿದಂತೆ ಕೃಷಿ ಉಪಕರಣಗಳಾದ ಹಾರೆ, ಪಿಕ್ಕಾಸು, ಗುದ್ದಲಿಗಳ ಮಾರಾಟ ಹಾಗೂ ಬಾಡಿಗೆ ನೀಡಲಾಗುತ್ತಿದೆ. ಅಡಕೆ ಒಣಗಿಸುವ ಪ್ಲಾಸ್ಟಿಕ್ ಶೀಟ್ ಮೊದಲಾದ ಕೃಷಿ ಉಪಕರಣಗಳನ್ನು ನೇರವಾಗಿ ಕಂಪನಿಯಿಂದ ತರಿಸಿ ಇಲ್ಲಿ ಮಾರಾಟ ಮಾಡಲಾಗುತ್ತದೆ. ಇದರಿಂದ ರೈತರಿಗೆ ಮಾರುಕಟ್ಟೆಗಿಂತ 50 ರುಪಾಯಿ ಕಡಿಮೆ ಬೆಲೆಗೆ ಕೃಷಿ ಉಪಕರಣಗಳು ಇಲ್ಲಿ ದೊರೆಯುತ್ತವೆ. 

ಎಲ್ಲವೂ ಇಲ್ಲಿ ರೈತರೇ 

ಕಂಪನಿಯಲ್ಲಿ ಒಂದು ಸಾವಿರ ರೈತರು 1000 ರುಪಾಯಿ ಬಂಡವಾಳದೊಂದಿಗೆ ಸದಸ್ಯರಾಗಿದ್ದಾರೆ. ಎರಡೂವರೆ ವರ್ಷದ ಹಿಂದೆ ಆರಂಭಗೊಂಡಿದ್ದು, ಈ ವರ್ಷದಿಂದ ಹಲಸು ಉತ್ಪನ್ನ ಮಾರುಕಟ್ಟೆ ಮಾಡುತ್ತಿದ್ದಾರೆ. ಸದಸ್ಯರಲ್ಲಿ 20 ಜನರ 50 ಗುಂಪು ರಚಿಸಿ, ಪ್ರತಿ ಗುಂಪಿಗೆ ಇಬ್ಬರು ಲೀಡರ್, ಬಳಿಕ ಅವರಲ್ಲೇ ನಿರ್ದೇಶಕರು, ಅಧ್ಯಕ್ಷರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಹಲಸಿನ ಬೆಳೆಗಾರರಿಗೆ ಪಿಂಗಾರದಿಂದಾಗಿ ಒಂದು ಭರವಸೆ ಮೂಡಿದೆ. ವೈಯಕ್ತಿಕವಾಗಿ ರೈತರಲ್ಲಿ ಬಂಡವಾಳವೂ ಇರುವುದಿಲ್ಲ. ಮಾರುಕಟ್ಟೆ ನೈಪುಣ್ಯತೆಯೂ ಇರುವುದಿಲ್ಲ. ಹಾಗಾಗಿ ಕಂಪನಿ ಮೂಲಕ ಮೌಲ್ಯವರ್ಧನೆ, ಮಾರುಕಟ್ಟೆ ಮಾಡಿದರೆ ರೈತರ ಬೆಳೆಗೆ ಉತ್ತಮ ಬೆಲೆ ಬರಲು ಸಾಧ್ಯ ಎನ್ನುತ್ತಾರೆ ಹಲಸು ಬೆಳೆಗಾರ ಮುಳಿಯ ವೆಂಕಟಕೃಷ್ಣ ಶರ್ಮ ಅವರು. ನಾವು ರೈತರೇ ಒಂದಾಗಿ ಹಲಸಿನ ಮೌಲ್ಯವರ್ಧನೆಗೆ ಮುಂದಾಗಿದ್ದೇವೆ. ಇಷ್ಟು ದೊಡ್ಡ ಮಟ್ಟದಲ್ಲಿ ರಾಜ್ಯದಲ್ಲೇ ಮೊದಲ ಪ್ರಯೋಗ. ಮಾರುಕಟ್ಟೆ ವಿಷಯದಲ್ಲಿ ಇನ್ನಷ್ಟು ಅನುಭವವಾಗಬೇಕಿದೆ. ಇಲ್ಲಿ ಮಧ್ಯವರ್ತಿಗಳ ಕಾಟವಿಲ್ಲದಿರುವುದರಿಂದ ರೈತರಿಗೆ ಅನುಕೂಲವಾಗಿದೆ. ಮುಂದೆ ಹಲಸಿನ ಬೀಜದ ಪೌಡರ್ ತಯಾರಿಸಲು ಉದ್ದೇಶಿಸಲಾಗಿದೆ ಎನ್ನುವ ಪಿಂಗಾರ ಕಂಪನಿ ಅಧ್ಯಕ್ಷರಾದ ರಾಮ್ ಕಿಶೋರ್ ಮಂಚಿ ಅವರ ಜೊತೆ ಮಾತಿಗೆ ದೂ. 9448156543

Follow Us:
Download App:
  • android
  • ios