ಪಕ್ಷದ ಆಧಾರದಲ್ಲಿ ಮಹದಾಯಿ ಸಮಸ್ಯೆಯನ್ನು ಬಗೆಹರಿಸಲಾಗದು ಎಂದು ಖಂಡತುಂಡವಾಗಿ ಹೇಳಿರುವ ಗೋವಾ ಮುಖ್ಯಮಂತ್ರಿ ಮನೋಹರ ಪರ್ರಿಕರ್, ಕರ್ನಾಟಕವು ಪಶ್ಚಿಮ ಘಟ್ಟಗಳಲ್ಲಿ ಜಲಾಶಯಗಳನ್ನು ನಿರ್ಮಿಸುತ್ತ ‘ಜೈವಿಕ ಬಾಂಬ್’ ಹುದುಗಿಸಿಡುತ್ತಿದೆ ಎಂದು ಕಿಡಿಕಾರಿದ್ದಾರೆ. ಈ ಸಮಸ್ಯೆಯನ್ನು ನಿಭಾಯಿಸಲು ಗೋವಾ ಬಳಿ ಕೆಲ ರಣನೀತಿಗಳು ಇವೆ ಎಂದು ಅವರು ಹೇಳಿದ್ದಾರೆ.

ಪಣಜಿ(ಆ.03): ಪಕ್ಷದ ಆಧಾರದಲ್ಲಿ ಮಹದಾಯಿ ಸಮಸ್ಯೆಯನ್ನು ಬಗೆಹರಿಸಲಾಗದು ಎಂದು ಖಂಡತುಂಡವಾಗಿ ಹೇಳಿರುವ ಗೋವಾ ಮುಖ್ಯಮಂತ್ರಿ ಮನೋಹರ ಪರ್ರಿಕರ್, ಕರ್ನಾಟಕವು ಪಶ್ಚಿಮ ಘಟ್ಟಗಳಲ್ಲಿ ಜಲಾಶಯಗಳನ್ನು ನಿರ್ಮಿಸುತ್ತ ‘ಜೈವಿಕ ಬಾಂಬ್’ ಹುದುಗಿಸಿಡುತ್ತಿದೆ ಎಂದು ಕಿಡಿಕಾರಿದ್ದಾರೆ. ಈ ಸಮಸ್ಯೆಯನ್ನು ನಿಭಾಯಿಸಲು ಗೋವಾ ಬಳಿ ಕೆಲ ರಣನೀತಿಗಳು ಇವೆ ಎಂದು ಅವರು ಹೇಳಿದ್ದಾರೆ.

ಬು‘ವಾರ ಗೋವಾ ವಿಧಾನಸಭೆಯಲ್ಲಿ ಮಾತನಾಡಿದ ಅವರು, ‘ಬೇಕೆಂದರೆ ಬಿಜೆಪಿಯವರೇ ಆದ ಮಹಾರಾಷ್ಟ್ರ ಮುಖ್ಯಮಂತ್ರಿ ಜತೆ ನಾನು ಮಾತನಾಡಬಹುದು. ಆದರೆ ಕೆಲವು ವಿಷಯಗಳನ್ನು ಸರ್ಕಾರಗಳಿಗೆ ಪಕ್ಷವನ್ನು ಆಧರಿಸಿ ಬಗೆಹರಿಸಲು ಆಗುವುದಿಲ್ಲ. ನನಗೆ ಗೋವಾ ಹಿತಾಸಕ್ತಿ ಮುಖ್ಯ. ಎಲ್ಲ ಪಕ್ಷಗಳ ಶಾಸಕರು ರಾಜ್ಯದ ಹಿತಾಸಕ್ತಿಯನ್ನು ಗಮನಿಸಿ ಮುಂದೆ ಬರಬೇಕು’ ಎಂದು ಶೂನ್ಯ ವೇಳೆಯಲ್ಲಿ ಹೇಳಿದರು.

‘ಕರ್ನಾಟಕವು ಸಂಪೂರ್ಣ ಸತ್ಯ ಬಿಚ್ಚಿಡುತ್ತಿಲ್ಲ. ಮಹದಾಯಿ ನ್ಯಾಯಾಧಿಕರಣದ ಮುಂದೆ ಈ ವಿಷಯ ಮನದಟ್ಟು ಮಾಡಿಕೊಡುವಲ್ಲಿ ನಾವು ಯಶಸ್ವಿಯಾಗಿದ್ದೇವೆ’ ಎಂದ ಪರ್ರಿಕರ್, ‘ಕರ್ನಾಟಕವು ಮುಂದಿನ ವರ್ಷ ಚುನಾವಣೆ ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಜಯಿಸಲು ಅಲ್ಲಿನ ಪಕ್ಷಗಳು ಈ ವಿಷಯವನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಸಾಧ್ಯತೆ ಇರುತ್ತದೆ’ ಎಂದು ಅಭಿಪ್ರಾಯಪಟ್ಟರು.

ಮಹದಾಯಿಯ ಶೇ.78 ಭಾಗ ಗೋವಾಕ್ಕೆ ಸೇರಿದೆ. ಗೋವಾ ನದಿ ನೀರಿನ ಪೈಕಿ ಶೇ.47ರಷ್ಟು ನೀರು ಮಹದಾಯಿಗೆ ಸೇರಿದೆ. ಈ ವಿವಾದ ನಿರ್ವಹಿಸಲು ಹಲವು ರಣನೀತಿಗಳು ನಮ್ಮಲ್ಲಿವೆ. ಆದರೆ ಅವನ್ನು ಬಹಿರಂಗ ಮಾಡಲಾಗದು ಎಂದರು.

ಕರ್ನಾಟಕಕ್ಕೆ ನೀರು ಬಳಸಿ ಗೊತ್ತಿಲ್ಲ:

ಕರ್ನಾಟಕಕ್ಕೆ ನೀರು ಬಳಸಿ ಗೊತ್ತೇ ಇಲ್ಲ ರಾಜ್ಯವು ಅನೇಕ ರಾಜ್ಯಗಳೊಂದಿಗೆ ನದಿ ನೀರು ವಿವಾದ ಹೊಂದಿದೆ. ನೀರನ್ನು ಹೇಗೆ ಸದ್ಬಳಕೆ ಮಾಡಿಕೊಳ್ಳಬೇಕು ಎಂಬ ಆಸಕ್ತಿಯನ್ನು ಕರ್ನಾಟಕ ಹೊಂದಿಲ್ಲ ಎಂದು ಗೋವಾ ಸಿಎಂ ಮನೋಹರ ಪರ‌್ರಿಕರ್ ಹೇಳಿದರು.