ಯೋಗಿ ಆದಿತ್ಯನಾಥ್ ಭೇಟಿ ಸಂದರ್ಭದಲ್ಲಿ ಇನ್ಮುಂದೆ ಇವೆಲ್ಲಾ ನಿಷೇಧ!
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜನಸಾಮಾನ್ಯರ, ಹುತಾತ್ಮರ ಭೇಟಿಗೆ ಹೋದಲ್ಲೆಲ್ಲಾ ಇನ್ಮುಂದೆ ಎಸಿ, ಏರ್ ಕೂಲರ್, ಕೆಂಪು ಹಾಸು, ಸೋಫಾ, ಕೇಸರಿ ಟವೆಲ್ ಇವೆಲ್ಲಾ ಇರುವುದಿಲ್ಲ; ಹೀಗೊಂದು ಆದೇಶವನ್ನು ಮುಖ್ಯಮಂತ್ರಿ ಕಚೇರಿಯಿಂದ ಅಧಿಕೃತವಾಗಿ ಹೊರಡಿಸಲಾಗಿದೆ.
ನವದೆಹಲಿ (ಜು.13): ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜನಸಾಮಾನ್ಯರ, ಹುತಾತ್ಮರ ಭೇಟಿಗೆ ಹೋದಲ್ಲೆಲ್ಲಾ ಇನ್ಮುಂದೆ ಎಸಿ, ಏರ್ ಕೂಲರ್, ಕೆಂಪು ಹಾಸು, ಸೋಫಾ, ಕೇಸರಿ ಟವೆಲ್ ಇವೆಲ್ಲಾ ಇರುವುದಿಲ್ಲ; ಹೀಗೊಂದು ಆದೇಶವನ್ನು ಮುಖ್ಯಮಂತ್ರಿ ಕಚೇರಿಯಿಂದ ಅಧಿಕೃತವಾಗಿ ಹೊರಡಿಸಲಾಗಿದೆ.
ಹುತಾತ್ಮರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಇಂತಹ ವರ್ಣರಂಜಿತ ವ್ಯವಸ್ಥೆಯಿಂದ ಯೋಗಿ ಆದಿತ್ಯನಾಥ್ ಅಸಮಾಧಾನಗೊಂಡಿದ್ದರು. ಹಾಗಾಗಿ ಭೇಟಿಯ ಸಂದರ್ಭದಲ್ಲಿ ಅವೆಲ್ಲವನ್ನು ನಿರಾಕರಿಸಿದ್ದರು. ಇಂತಹ ತೋರ್ಪಡಿಕೆಯ ಪ್ರದರ್ಶನಕ್ಕೆ ಪೂರ್ಣವಿರಾಮ ಇಡಲು ಯೋಗಿ ಆದಿತ್ಯನಾಥ್ ಆದೇಶಿಸಿದ್ದಾರೆ.
ಸಾರ್ವಜನಿಕ ಭೇಟಿ ವೇಳೆ ಯಾವುದೇ ವಿಶೇಷ ವ್ಯವಸ್ಥೆ ಮಾಡಬಾರದು. ಇದರಿಂದ ಸಾರ್ವಜನಿಕರಿಗಾಗುವ ತೊಂದರೆಯನ್ನು ತಪ್ಪಿಸಬೇಕು ಎಂದು ಸ್ಪಷ್ಟವಾಗಿ ಉನ್ನತ ಅಧಿಕಾರಿಗಳು, ಪೊಲೀಸ್ ಆಯುಕ್ತರು, ಆಡಳಿತಾಧಿಕಾರಿಗಳಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದೇಶಿಸಿದ್ದಾರೆ.
ಇತ್ತೀಚಿಗೆ ಗೋರಕ್’ಪುರ, ಡಿಯೋರಿಯಾದಲ್ಲಿ ಹುತಾತ್ಮರ ಮನೆಗೆ ಭೇಟಿ ನೀಡಿದಂತಹ ಸಂದರ್ಭದಲ್ಲಿ ಮುಖ್ಯಮಂತ್ರಿ ಭೇಟಿ ನಿಮಿತ್ತ ಸೋಫಾ, ಕೆಂಪುಹಾಸು, ಮತ್ತು ಎಸಿ ವ್ಯವಸ್ಥೆ ಮಾಡಲಾಗಿತ್ತು. ಇದಕ್ಕೆ ಯೋಗಿ ಅಸಮಾಧಾನ ವ್ಯಕ್ತಪಡಿಸಿದ್ದರು.