ರೈಲು ತಡವಾದರೆ ಪ್ರಯಾಣಿಕರಿಗೆ ಆಹಾರ, ನೀರಿನ ಸೌಲಭ್ಯ
- ಭೋಜನ ಸಮಯದಲ್ಲಿ ರೈಲುಗಳು ತಡವಾಗಿ ಬಂದರೆ ಪ್ರಯಾಣಿಕರಿಗೆ ಪ್ಲಾಟ್'ಪಾರ್ಮ್'ನಲ್ಲಿಯೇ ನೀರು ಹಾಗೂ ಆಹಾರದ ವ್ಯವಸ್ಥೆ
- ಹವಾಮಾನ ಜಾಗೃತಿ ಮಾಹಿತಿ, ಪ್ರಯಾಣಿಕರ ಸುರಕ್ಷತೆಗಾಗಿ ಹೆಚ್ಚಿನ ಭದ್ರತಾ ವ್ಯವಸ್ಥೆ ಸೇರಿದಂತೆ ರೈಲ್ವೆ ಅಭಿವೃದ್ಧಿಗಾಗಿ ಹಲವು ಯೋಜನೆ
ನವದೆಹಲಿ[ಜೂ.18]: ಶುಚಿತ್ವ ಹಾಗೂ ಸಮಯಪಾಲನೆಗೆ ಒತ್ತು ಕೊಡುವ ನಿಟ್ಟಿನಲ್ಲಿ ದೃಢ ಹೆಜ್ಜೆಯನ್ನು ಇಡುತ್ತಿರುವ ಭಾರತೀಯ ರೈಲ್ವೆ ಪ್ರಯಾಣಿಕರಿಗೆ ಉತ್ತಮ ಸೇವೆ ನೀಡಲು ಮತ್ತೊಂದು ದಾಪುಗಾಲು ಇಟ್ಟಿದೆ.
ಇನ್ನು ಮುಂದೆ ಭೋಜನ ಸಮಯದಲ್ಲಿ ರೈಲುಗಳು ತಡವಾಗಿ ಬಂದರೆ ಆ ಸಮಯದಲ್ಲಿ ಪ್ರಯಾಣಿಕರಿಗೆ ಪ್ಲಾಟ್'ಪಾರ್ಮ್'ನಲ್ಲಿಯೇ ನೀರು ಹಾಗೂ ಆಹಾರದ ವ್ಯವಸ್ಥೆಯನ್ನು ಒದಗಿಸಲಾಗುತ್ತದೆ ಎಂದು ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯಲ್ ತಿಳಿಸಿದ್ದಾರೆ.
ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಇಲಾಖೆಯು ದೇಶಾದ್ಯಂತವಿರುವ ಎಲ್ಲ ನಿಲ್ದಾಣಗಳಲ್ಲಿ ಸಂಪರ್ಕವನ್ನು ಹೊಂದಿದ್ದು, ಪ್ರಯಾಣಿಕರಲ್ಲಿ ಜಾಗೃತಿಯನ್ನು ಮೂಡಿಸಲಾಗುತ್ತದೆ. ಆಹಾರ ಒದಗಿಸುವಲ್ಲಿ ಉತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳಲಾಗುತ್ತದೆ. ಇದರಲ್ಲಿ ಯಾವುದೇ ರಾಜಿಯಿಲ್ಲ. ತ್ಯಾಜ್ಯಗಳು ಎಲ್ಲೆಂದರಲ್ಲಿ ಹಾಕಬಾರದು ಹಾಗೂ ಕಸದ ಡಬ್ಬಿಗಳಲ್ಲಿಯೇ ಹಾಕಬೇಕೆಂಬ ನಿಯಮವನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಲಾಗಿದೆ ಎಂದು ಗೋಯಲ್ ತಿಳಿಸಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಹವಾಮಾನ ಜಾಗೃತಿ ಮಾಹಿತಿ, ಪ್ರಯಾಣಿಕರ ಸುರಕ್ಷತೆಗಾಗಿ ಹೆಚ್ಚಿನ ಭದ್ರತಾ ವ್ಯವಸ್ಥೆ ಸೇರಿದಂತೆ ರೈಲ್ವೆ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿದೆ.