ಅನ್ನಭಾಗ್ಯ ಯೋಜನೆ ಬಗ್ಗೆ ಸರ್ಕಾರದ ನಿರ್ಧಾರವೇನು ?
ಅನ್ನಭಾಗ್ಯ ಯೋಜನೆಯಡಿ ನೀಡುವ ಅಕ್ಕಿ ಪ್ರಮಾಣದಲ್ಲಿ ಕಡಿತವಾಗಲಿದೆ ಎನ್ನುವ ಬಗ್ಗೆ ಬಿ ಎಸ್ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ.
ನವದೆಹಲಿ/ಬೆಂಗಳೂರು [ಆ.18]: ಅನ್ನಭಾಗ್ಯ ಯೋಜನೆಯಡಿ ನೀಡುವ ಅಕ್ಕಿ ಪ್ರಮಾಣದಲ್ಲಿ ಕಡಿತವಾಗಲಿದೆ ಎಂಬುದು ಶುದ್ಧ ಸುಳ್ಳು. ಬಡವರಿಗೆ ನೀಡುವ ಅಕ್ಕಿ ಪ್ರಮಾಣದಲ್ಲಿ ಕಡಿತ ಮಾಡುವ ಯಾವುದೇ ಪ್ರಸ್ತಾವನೆಯೂ ನನ್ನ ಮುಂದಿಲ್ಲ. ಅಕ್ಕಿ ಪ್ರಮಾಣದಲ್ಲಿ ಕಡಿತ ಮಾಡುವುದೂ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಶನಿವಾರ ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನ್ನಭಾಗ್ಯ ಯೋಜನೆ ಮುಂದುವರಿಸಲು ಅನುದಾನ ಬಿಡುಗಡೆ ಕುರಿತ ಕಡತಕ್ಕೆ ನಾನು ಈಗಾಗಲೇ ಸಹಿ ಕೂಡ ಮಾಡಿದ್ದೇನೆ ಎಂದು ತಿಳಿಸಿದರು.
ಬಡವರ ಪರವಾದ ಕಾರ್ಯಕ್ರಮಗಳನ್ನು ಹೆಚ್ಚೆಚ್ಚು ಮಾಡಬೇಕು ಎನ್ನುವ ವ್ಯಕ್ತಿ ನಾನು. ದೀನದಲಿತರ, ಅಲ್ಪಸಂಖ್ಯಾತರ, ಹಿಂದುಳಿದ ವರ್ಗಗಳ ಪರವಾದ ಕಾರ್ಯಕ್ರಮಗಳನ್ನು ಹಿಂದಿನ ಸರ್ಕಾರ ಮಾಡಿದ್ದರೇನು, ಈಗಿನ ಸರ್ಕಾರ ಮಾಡಿದರೇನು? ಬಡವರಿಗೆ ಪ್ರಯೋಜನ ಮಾಡಬೇಕು ಎಂಬ ಸದುದ್ದೇಶ ಎಲ್ಲರಿಗೂ ಇದೆ. ಆದ್ದರಿಂದ ಹಿಂದಿನ ಸರ್ಕಾರದ ಮುಖ್ಯಮಂತ್ರಿಗಳು ಆತಂಕಪಡುವ ಅಗತ್ಯವಿಲ್ಲ. ಇರುವ ಜನಪರ ಕಾರ್ಯಕ್ರಮಗಳನ್ನು ರದ್ದು ಮಾಡುವ ಉದ್ದೇಶವಿಲ್ಲ ಎಂದು ಹೇಳಿದರು.